ರಾಯಚೂರು, ಜನವರಿ 30: ಜಿಲ್ಲೆಯ ಸಿರವಾರ ತಾಲ್ಲೂಕಿನ ಚಿಕ್ಕ ಹಣಗಿ ಗ್ರಾಮದಲ್ಲಿ ನಾಲ್ಕು ತಿಂಗಳ ಗರ್ಭಿಣಿ ಸೊಸೆಯನ್ನು ಕತ್ತು ಸೀಳಿ ಕೊಲೆಗೈದ ಘಟನೆ ಜನವರಿ 29ರಂದು ಬೆಳಕಿಗೆ ಬಂದಿದ್ದು, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಕೌಟುಂಬಿಕ ಕಲಹವೇ ಈ ಭೀಕರ ಕೃತ್ಯಕ್ಕೆ ಕಾರಣವೆಂದು ಹೇಳಲಾಗಿದ್ದರೂ, ಪೊಲೀಸ್ ತನಿಖೆಯಲ್ಲಿ ಕೊಲೆಯ ಹಿಂದಿನ ನಿಜವಾದ ಉದ್ದೇಶ ಬಹಿರಂಗವಾಗಿದೆ.
ಇದನ್ನು ಓದಿ: ಒಂದೇ ಕುಟುಂಬಕ್ಕೆ ಸೇರಿದ 11 ಮಂದಿಗೆ ಮರಣದಂಡನೆ..ಈ ಪ್ರಕರಣದ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!!
ಇದನ್ನು ಓದಿ: ತಾಯಿ ಮತ್ತು ಪತ್ನಿ ಹತ್ಯೆ: ತಲೆ ಜಜ್ಜಿ ಮಾಂಸ ಸೇವಿಸಿದ ವ್ಯಕ್ತಿ
ನಡೆದಿದ್ದೇನು?
ಗುರುವಾರ ಮೃತ ರೇಖಾಳ (24) ಮನೆಗೆ ಬಂದಿದ್ದ ಮಾವ ಸಿದ್ದಪ್ಪ (50), ನಾಲ್ಕು ತಿಂಗಳ ಗರ್ಭಿಣಿ ಸೊಸೆಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿದ ರೇಖಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ನರಳಾಡಿ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದ. ಪ್ರಾಥಮಿಕವಾಗಿ ಕೌಟುಂಬಿಕ ಕಲಹದ ಹಿನ್ನೆಲೆ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿತ್ತು.
ತನಿಖೆಯಲ್ಲಿ ಹೊರಬಂದ ಸತ್ಯ
ಪರಾರಿಯಾಗಿದ್ದ ಆರೋಪಿಯನ್ನು ಕವಿತಾಳ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಸ್ತಿ ಲಾಭಾಸಕ್ತಿಯೇ ಈ ಕೊಲೆಗೆ ಮೂಲ ಕಾರಣ ಎಂಬುದು ಬೆಳಕಿಗೆ ಬಂದಿದೆ. ಮೃತ ರೇಖಾಳ ಆಸ್ತಿಯ ಮೇಲೆ ಕಣ್ಣು ಹಾಕಿದ್ದ ಸಿದ್ದಪ್ಪ, ಆಸ್ತಿಗಾಗಿ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಸೊಸೆ ತನ್ನ ಪೋಷಕರ ಬಳಿ ಆಸ್ತಿ ಕೇಳುತ್ತಿಲ್ಲ, ಮನೆ ಹಾಗೂ ಹೊಲದ ಕೆಲಸ ಮಾಡುತ್ತಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಆಕೆಯನ್ನು ನಿರಂತರವಾಗಿ ಹಿಂಸಿಸುತ್ತಿದ್ದುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಮೃತಳ ತಂದೆಯ ಆರೋಪ
ರೇಖಾ ತನ್ನ ಮಾತು ಕೇಳುವುದಿಲ್ಲ, ಆಕೆಗೆ ಹುಟ್ಟುವ ಮಗು ನಮಗೆ ಬೇಡ ಎಂಬ ಕ್ರೂರ ಮನಸ್ಥಿತಿಯಿಂದಲೇ ಈ ಕೊಲೆ ಮಾಡಲಾಗಿದೆ ಎಂದು ಮೃತಳ ತಂದೆ ಬಸವರಾಜ್ ಗಂಭೀರ ಆರೋಪ ಮಾಡಿದ್ದಾರೆ. ಟಿವಿ9 ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿದ ಅವರು, ಮಗಳು ಗೃಹಹಿಂಸೆ ಅನುಭವಿಸುತ್ತಿದ್ದರೂ ಪೋಷಕರಿಗೆ ನೋವು ಕೊಡಬಾರದೆಂದು ಎಲ್ಲವನ್ನೂ ಸಹಿಸಿಕೊಂಡಿದ್ದಳು ಎಂದರು. ರೇಖಾಳ ಮೇಲೆ ಶಾರೀರಿಕ ಹಾಗೂ ಮಾನಸಿಕ ಹಿಂಸೆ ನಡೆಸಲಾಗುತ್ತಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಈ ಪ್ರಕರಣವು ಗರ್ಭಿಣಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಪರಿಣಾಮಕಾರಿ ಜಾರಿಗೆ ಮತ್ತೊಮ್ಮೆ ಪ್ರಶ್ನೆ ಎತ್ತಿದೆ. ಮುಂದಿನ ದಿನಗಳಲ್ಲಿ ಪೊಲೀಸರು ತನಿಖೆಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ.






