ಯಾರೆ ಇರಲಿ ಆರೋಪ ಸಾಬೀತಾಗದೇ ಇದ್ದರೂ ವಿಚಾರಣೆ ಹಂತದಲ್ಲಿ 30 ದಿನಕ್ಕಿಂತ ಹೆಚ್ಚು ಅವಧಿ ಜೈಲಿನಲ್ಲಿದ್ದರೆ ಪ್ರಧಾನಿ ಹಾಗೂ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬಹುದು ಎಂಬ ವಿವಾದಾತ್ಮಕ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಅಪರಾಧ ಮಾಡಿದ್ರೆ ಅಧಿಕಾರವನ್ನೂ ಕಳೆದುಕೊಳ್ಳದೆ ಜೈಲಿನಲ್ಲಿರ್ತಾರೆ. ಗಂಭೀರ ಪ್ರಕರಣಗಳಲ್ಲಿ ಬಂಧನಕ್ಕೊಳಗಾದ ನಂತರವೂ ಮುಖ್ಯಮಂತ್ರಿಗಳು, ಸಚಿವರು ಹುದ್ದೆಯನ್ನು ಬಿಡದೆ, ಜೈಲಿನಿಂದಲೇ ಕಾರ್ಯ ನಿರ್ವಹಿಸಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಂಡಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಆರೋಪದ ಮೇಲೆ ಜೈಲಿಗೆ ಹೋಗಿ ಬಂದರೆ ಅವರು ಮತ್ತೆ ಗೆದ್ದು ಬರುತ್ತಾರೆ. ಅದಿಷ್ಟೇ ಅಲ್ಲದೇ, ಕೆಲವರಂತೂ ಜೈಲಿನಿಂದಲೂ ಚುನಾವಣೆಗೆ ನಿಂತು ಗೆದ್ದಿರುವುದಕ್ಕೆ ಸಹ ಅನೇಕ ಉದಾಹರಣೆಗಳಿದೆ. ಆದರೆ ಇದೀಗ ಈ ರೀತಿ ಆಗದಂತೆ ತಡೆಯಲು ಕೇಂದ್ರ ಸರ್ಕಾರ ಹೊಸ ಹೆಜ್ಜೆ ಇಟ್ಟಿದ್ದು, ಸಂವಿಧಾನದ 130ನೇ ತಿದ್ದುಪಡಿ ಮಸೂದೆಯನ್ನು ತರಲು ಸಜ್ಜಾಗಿದೆ.
ಸಂವಿಧಾನದ 130ನೇ ತಿದ್ದುಪಡಿ ಮಸೂದೆ (130th Amendment Bill)
ಸಂವಿಧಾನದ 130ನೇ ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದೆ. ಈ ಮಸೂದೆ ಕಾನೂನಾಗಿ ಒಪ್ಪಿಗೆಯಾದರೆ ಇದರಿಂದ ಅನೇಕ ಬದಲಾವಣೆ ಆಗಲಿದೆ. ಈ ಮಸೂದೆಯ ಪ್ರಕಾರ ಯಾವುದಾದರೂ ಗಂಭೀರ ಪ್ರಕರಣಗಳಲ್ಲಿ ಸಚಿವರು, ರಾಜಕೀಯ ನಾಯಕರು ಅವರು ಪ್ರಧಾನಿ ಆಗಿರಲಿ ಅಥವಾ ಸಿಎಂ ಯಾವುದೇ ಹುದೆಯಲ್ಲಿದ್ದರೂ ಸಹ 30 ದಿನಗಳ ಕಾಲ ಜೈಲಿನಲ್ಲಿ ಇದ್ದರೆ ಅವರನ್ನ ಅಧಿಕಾರದಿಂದ ಕೆಳಗೆ ಇಳಿಸಲಾಗುತ್ತದೆ.
ಸಾಮಾನ್ಯವಾಗಿ ರಾಜಕೀಯ ನಾಯಕರ ಮೇಲೆ ಅದರಲ್ಲೂ ಅಧಿಕಾರಿದಲ್ಲಿ ಇರುವವರ ಮೇಲೆ ಆರೋಪ ಬಂದರೆ ವಿರೋಧ ಪಕ್ಷದವರು ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಾರೆ. ಆದರೆ ಈ ಮಸೂದೆ ಜಾರಿಯಾದರೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುವ ಅವಶ್ಯಕತೆಯೇ ಬರುವುದಿಲ್ಲ. ಅದರಲ್ಲೂ ಆ ನಾಯಕರನ್ನ ಪೊಲೀಸರು ಬಂಧಿಸಿದರೆ, ಅವರ ಸ್ಥಾನಮಾನವನ್ನ ರದ್ದು ಮಾಡಲಾಗುತ್ತದೆ. ಇದು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸಹ ಅನ್ವಯವಾಗುತ್ತದೆ.
ಇನ್ನು ಈ ಹೊಸ ಮಸೂದೆಯ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದ್ದು, ಆಡಳಿತದಲ್ಲಿ ಯಾವುದೇ ಸಮಸ್ಯೆ ಆಗದಂತೆ ಕೆಲಸ ಮಾಡಲು ಈ ಕಾನೂನು ಸಹಾಯ ಮಾಡುತ್ತದೆ. ಅದರ ಜೊತೆಗೆ ಇದು ಸಾಂವಿಧಾನಿಕವಾಗಿ ಮತ್ತು ನ್ಯಾಯಯುತವಾಗಿ ಆಡಳಿತವನ್ನ ನಡೆಸಲು ಈ ಮಸೂದೆ ಬಹಳ ಅಗತ್ಯವಾಗಿದ ಎಂದು ಹೇಳಿದ್ದಾರೆ. ಅಲ್ಲದೇ, ಈ ಮಸೂದೆಯ ಅನುಸಾರ ಗಂಭೀರ ಪ್ರಕರಣಗಳಲ್ಲಿ ಯಾವುದೇ ರಾಜಕಾರಣಿ ಬಂಧನವಾದರೆ ಅವರು ಅಧಿಕಾರದಲ್ಲಿ ಮುಂದುವರೆಯುವುದು ನಿಜಕ್ಕೂ ಆಡಳಿತಕ್ಕೆ ಅಪಾಯಕಾರಿಯಾಗಿದೆ. ಇದರಿಂದ ಆಡಳಿತದಲ್ಲಿ ಸಮಸ್ಯೆಗಳಾಗಬಹುದು. ಹಾಗಾಗಿ ಈ ಮಸೂದೆಯನ್ನ ಜಾರಿಗೆ ತರಲಾಗುತ್ತಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇಂದು ಮಂಡನೆಯಾದ ಮಸೂದೆ
ಇನ್ನು ಈ ಮಸೂದೆಗೆ ಸಂಬಂಧಪಟ್ಟಂತೆ ಅನೇಕ ನಿಯಮಗಳಿದೆ. ಮುಖ್ಯವಾಗಿ ಯಾವುದೇ ಆರೋಪದ ಮೇಲೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ವಿಧಿಸಿದ್ದರೆ, ಅವರನ್ನ ತಕ್ಷಣವೇ ಹುದ್ದೆಯಿಂದ ತೆಗೆದು ಹಾಕಬಹುದಾಗಿದೆ. ಇನ್ನು ಮುಖ್ಯವಾಗಿ ಸಚಿವರು ಅಥವಾ ಸಿಎಂ ಮತ್ತು ಪಿಎಂ ಯಾರೇ ಅವರಿಗೆ ಅಪರಾಧ ಪ್ರಕರಣಗಳಲ್ಲಿ 30 ದಿನಗಳ ಒಳಗೆ ಜಾಮೀನು ಸಿಗದಿದ್ದರೆ ಅವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಮಸೂದೆಯಲ್ಲಿ ಉಲ್ಲೇಖವಾಗಿದೆ. ಅಲ್ಲದೇ, ಬಂಧನವಾದ 30 ದಿನಗಳ ನಂತರ ಅವರೇ ರಾಜೀನಾಮೆ ಕೊಡದಿದ್ದರೆ, ಅವರನ್ನ 31ನೇ ದಿನ ಹುದೆಯಿಂದ ಅಮಾನತು ಅಥವಾ ತೆಗೆದು ಹಾಕಲು ಈ ಮಸೂದೆ ಅವಕಾಶ ನೀಡುತ್ತದೆ.
ಇಂತಹ ಹಲವು ಪ್ರಕರಣಗಳಲ್ಲಿ ಸಚಿವರನ್ನು ವಜಾಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇತ್ತೀಚೆಗೆ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಸಂದರ್ಭದಲ್ಲಿ, ಗಂಭೀರ ಅಪರಾಧಗಳ ಆರೋಪದ ಮೇಲೆ ಬಂಧಿಸಲ್ಪಟ್ಟ ಸಚಿವರು ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಸಂಸತ್ತಿನಲ್ಲಿ ಮಂಡಿಸಲಾಗುವ ಈ ಮಸೂದೆಯನ್ನು ಮೊದಲು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬಹುದು ಎಂದು ಹೇಳಲಾಗಿದೆ. ಇದರಲ್ಲಿ ಎಲ್ಲಾ ವಿರೋಧ ಪಕ್ಷಗಳ ಅಭಿಪ್ರಾಯವನ್ನೂ ತೆಗೆದುಕೊಳ್ಳಲಾಗುತ್ತದೆ. ಜೆಪಿಸಿಗೆ ಕಳುಹಿಸಿದ ನಂತರ, ಈ ಮಸೂದೆಯನ್ನು ಸಂಸತ್ತು ಅಂಗೀಕರಿಸಬಹುದು ಮತ್ತು ನಂತರ ಅದು ಮಂತ್ರಿಗಳಿಗೆ ಕಾನೂನಾಗುತ್ತದೆ. ಅಂದರೆ ಇದು ಇನ್ನೂ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ವಿರೋಧ ಪಕ್ಷಗಳು ಇದನ್ನು ವಿರೋಧಿಸುವುದಾಗಿ ಹೇಳಿವೆ.
ಆರೋಪ ಸಬೀತಾಗದಿದ್ದರೆ ಹುದ್ದೆಯನ್ನು ಹಿಂತಿರುಗಿಸಲಾಗುತ್ತದೆ. ರಾಜಕೀಯ ಕಾರಣಗಳಿಂದ ಅಥವಾ ಸುಳ್ಳು ಆರೋಪಗಳಿಂದ ಸಚಿವರು ತೊಂದರೆಗೆ ಸಿಲುಕಿ ಜೈಲಿಗೆ ಹೋಗಿರಬಹುದು, ಅಂತಹ ಸಂದರ್ಭದಲ್ಲಿ, ಅವರನ್ನು ಅವರ ಹುದ್ದೆಗಳಿಂದ ತೆಗೆದುಹಾಕುವುದು ಅನ್ಯಾಯವಾಗುತ್ತದೆ, ಆದರೆ ಈ ಮಸೂದೆಯಲ್ಲಿ ಬಂಧನದಿಂದ ಬಿಡುಗಡೆಯಾದ ನಂತರ ಅವ ಹುದ್ದೆಯನ್ನು ಮತ್ತೆ ಪಡೆಯಬಹುದಾಗಿದೆ.






