ಬಸ್ನಲ್ಲಿ ಸಂಭವಿಸಿದ ಸಣ್ಣ ದೈಹಿಕ ಸ್ಪರ್ಶವನ್ನು ಲೈಂಗಿಕ ದೌರ್ಜನ್ಯ ಎಂದು ಆರೋಪಿಸಿ ಮಹಿಳೆಯೊಬ್ಬರು ಹಂಚಿಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಆರೋಪ ಎದುರಿಸಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಸೃಷ್ಟಿಸುವ ಭರದಲ್ಲಿ ಅಮಾಯಕನೊಬ್ಬ ತನ್ನ ಜೀವವನ್ನೇ ಕಳೆದುಕೊಂಡನೇ ಎಂಬ ಪ್ರಶ್ನೆ ಇದೀಗ ಗಂಭೀರವಾಗಿ ಕೇಳಿಬರುತ್ತಿದೆ.
ಇದನ್ನು ಓದಿ: ಸಂಕ್ರಾಂತಿ ಪಾರ್ಟಿಯಲ್ಲಿ ಮಿತಿ ಮೀರಿದ ಮದ್ಯಪಾನ, 19 ಟಿನ್ ಬಿಯರ್ ಸೇವನೆ… ಇಬ್ಬರ ಸಾವು…!
ಕೇರಳದ ಕೋಯಿಕ್ಕೋಡ್ ನಿವಾಸಿಯಾದ 42 ವರ್ಷದ ಯು. ದೀಪಕ್ ಅವರು ಜನವರಿ 18ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವು ದಿನಗಳ ಹಿಂದೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂಬ ಆರೋಪ ಅವರ ಮೇಲೆ ಕೇಳಿಬಂದಿತ್ತು. ಈ ಸಂಬಂಧ ಶಿಮ್ಜಿತಾ ಎಂಬ ಮಹಿಳೆ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ವೈರಲ್ ಆದ ವಿಡಿಯೋದಲ್ಲಿ ದೀಪಕ್ ಅವರ ಮೊಣಕೈ ಮಹಿಳೆಗೆ ತಾಗಿರುವುದು ಮಾತ್ರವೇ ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ಶಿಮ್ಜಿತಾ ಅವರು ಲೈಂಗಿಕ ಗಡಿ ಉಲ್ಲಂಘನೆ ಎಂದು ಆರೋಪಿಸಿದರೆ, ಹಲವರು ಜನದಟ್ಟಣೆ ಇರುವ ಬಸ್ನಲ್ಲಿ ಅನಾಯಾಸವಾಗಿ ಸಂಭವಿಸಿದ ಸ್ಪರ್ಶವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವ್ಯಾಪಕವಾಗಿ ಹರಡಿದ ನಂತರ ದೀಪಕ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಜನವರಿ 18ರಂದು ಅವರು ತಮ್ಮ ಕೊಠಡಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದು, ಈ ಘಟನೆ ಕೇರಳದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಪ್ರಚಾರ ಅಥವಾ ವೈರಲ್ ಆಗುವ ಉದ್ದೇಶದಿಂದ ಇಂತಹ ಗಂಭೀರ ಆರೋಪಗಳನ್ನು ಮಾಡುವುದರಿಂದ ನಿರಪರಾಧಿಗಳ ಜೀವನ ನಾಶವಾಗುತ್ತಿದೆ ಎಂಬ ಟೀಕೆಗಳು ಹೆಚ್ಚಾಗಿವೆ. ಅವಸರದ ಆರೋಪಗಳು ಮಾನಸಿಕವಾಗಿ ಅಮಾಯಕರನ್ನು ನಲುಗಿಸುತ್ತಿವೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ದೀಪಕ್ ಅವರ ಕುಟುಂಬಕ್ಕೆ ನೆರವು ನೀಡುವುದಾಗಿ ಅವರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಕೋಯಿಕ್ಕೋಡ್ ಪೊಲೀಸರು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದು, ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ದೀಪಕ್ ಅವರ ಕುಟುಂಬವು ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.






