ಕೊಲ್ಕತ್ತಾ | ಜನವರಿ 29, 2026
ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಮೀಪದ ಆನಂದಪುರ (South 24 Parganas) ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ದೇಶಾದ್ಯಂತ ಆಘಾತ ಮೂಡಿಸಿದೆ. ಜನವರಿ 26ರ ತಡರಾತ್ರಿ ಗೋದಾಮುಗಳು ಮತ್ತು ಆಹಾರ ಉತ್ಪಾದನಾ ಘಟಕದಲ್ಲಿ ಉಂಟಾದ ಬೆಂಕಿಯಿಂದಾಗಿ ಇದುವರೆಗೆ 21 ಜನರ ಶವಗಳು ಪತ್ತೆಯಾಗಿವೆ, ಇನ್ನು 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಎಕ್ಸ್ ಪ್ರೆಸ್ ವೇನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ವಾಹನಗಳಿಗೆ ಹೊತ್ತಿಕೊಂಡ ಬೆಂಕಿ
ಇದನ್ನು ಓದಿ: ತಾಯಿಯ ಅಂತಿಮ ದರ್ಶನಕ್ಕೂ ಬರಲಾಗದ ಮಗ: ವೀಡಿಯೋ ಕಾಲ್ನಲ್ಲಿ ಕಣ್ಣೀರಿನ ವಿದಾಯ
ಅಗ್ನಿ ಅವಘಡ ಸಂಭವಿದು ಹೇಗೆ ?
ತಡರಾತ್ರಿ ಸುಮಾರು 3 ಗಂಟೆ ಸುಮಾರಿಗೆ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಅದು ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಒಳಗೆ ಇದ್ದ ಕಾರ್ಮಿಕರು ಹೊರಬರಲು ಸಾಧ್ಯವಾಗದೆ ಬೆಂಕಿಯೊಳಗೆ ಸಿಲುಕಿದ್ದಾರೆ ಎನ್ನಲಾಗಿದೆ. ಬೆಂಕಿಯ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಕಟ್ಟಡ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಶವ ಪತ್ತೆ, DNA ಪರೀಕ್ಷೆ
ಪತ್ತೆಯಾದ ಹೆಚ್ಚಿನ ಶವಗಳು ತೀವ್ರವಾಗಿ ಕರಕಲಾಗಿರುವುದರಿಂದ ಗುರುತು ಪತ್ತೆ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ಗುರುತಿಗಾಗಿ DNA ಪರೀಕ್ಷೆ ಪ್ರಾರಂಭಿಸಲಾಗಿದೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಸ್ಥಳೀಯ ಪೊಲೀಸರು ನಿರಂತರವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಭಾರೀ ಹೊಗೆ, ಕುಸಿದ ಅವಶೇಷಗಳು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿವೆ. ಹಲವಾರು ಗಂಟೆಗಳ ಪರಿಶ್ರಮದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ.
ನಿಷೇಧಾಜ್ಞೆ ಜಾರಿ
ಘಟನೆಯ ಗಂಭೀರತೆಯನ್ನು ಗಮನಿಸಿ, ಸ್ಥಳದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸಂಚಾರ ಮತ್ತು ಜನಸಂಗಮವನ್ನು ನಿಯಂತ್ರಿಸಿ ಶೋಧ ಕಾರ್ಯ ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.





