ಸಿದ್ದರಾಮಯ್ಯ ಅವರಿಗೆ ಎಲ್ಲವೂ ಒಳಿತಾಗಲಿ. ನಾನು ಅವರಿಗೆ ಆಲ್ ದ ಬೆಸ್ಟ್ ವಿಶ್ ಮಾಡುತ್ತೇನೆ, ಗುಡ್ ಲಕ್,” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಸದಾಶಿವನಗರ ನಿವಾಸ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಇದನ್ನು ಓದಿ: ಮಕ್ಕಳಿಗೆ ಹಣದ ಪಾಠ: ಉಪದೇಶಕ್ಕಿಂತ ಅನುಭವ ಮುಖ್ಯ
ಈ ಹೇಳಿಕೆಗಳಿಂದ ಮತ್ತೆ ರಾಜಕೀಯ ಗೊಂದಲ ಉಂಟಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಗೊಂದಲ ಮಾಡಿಕೊಳ್ಳುತ್ತಿರುವುದು ನೀವು ಮಾಧ್ಯಮದವರು. ನಮ್ಮೊಳಗೆ ಯಾವುದೇ ಗೊಂದಲ ಇಲ್ಲ,” ಎಂದು ಸ್ಪಷ್ಟಪಡಿಸಿದರು. ಸಿಎಂ ಅವರು ದಾಖಲೆ ನಿರ್ಮಿಸುತ್ತಿರುವ ಬಗ್ಗೆ ಕೇಳಿದಾಗ, “ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ. ಉತ್ತಮ ಆರೋಗ್ಯ ದೊರೆಯಲಿ. ಜನರ ಸೇವೆ ಮಾಡುವ ಶಕ್ತಿಯನ್ನು ಭಗವಂತ ಅವರಿಗೆ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ,” ಎಂದು ಹೇಳಿದರು.
ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ನೀಡಿದ ಡಿಕೆಶಿ
ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಲಾದ ಪರಿಹಾರ ಹಣದ ಮೂಲದ ಬಗ್ಗೆ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷಗಳು ಆರೋಪ ಮಾಡುತ್ತಿರುವ ಕುರಿತು ಪ್ರಶ್ನಿಸಿದಾಗ, “ಐಟಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ವಿರೋಧ ಪಕ್ಷಗಳ ಜೇಬಲ್ಲೇ ಇದೆಯಲ್ಲವೇ? ಕುಮಾರಸ್ವಾಮಿ ಅವರ ಜೇಬಲ್ಲೇ ಐಟಿ ಇಲಾಖೆ ಇದೆ ಅಲ್ವಾ?” ಎಂದು ವ್ಯಂಗ್ಯವಾಡಿದರು.
ಪರಿಹಾರ ಹಣದ ವಿಚಾರದಲ್ಲಿ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಬಳ್ಳಾರಿ ಭೇಟಿ ಕುರಿತು ಬಳ್ಳಾರಿ ಭೇಟಿ ಕುರಿತು ಮಾತನಾಡಿದ ಅವರು, “ರಾಜ್ಯದಲ್ಲಿಯೂ, ವಿಶೇಷವಾಗಿ ಬಳ್ಳಾರಿಯಲ್ಲೂ ಶಾಂತಿಯುತ ವಾತಾವರಣ ಇರಬೇಕು. ಬಿಜೆಪಿ ಹತಾಶೆಯಿಂದ ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ. ಅಲ್ಲಿಗೆ ತೆರಳಿ ಪರಿಸ್ಥಿತಿಯನ್ನು ಸ್ವತಃ ಅವಲೋಕಿಸುತ್ತೇನೆ,” ಎಂದರು.
ಸೋನಿಯಾ ಗಾಂಧಿ ಆರೋಗ್ಯ ವಿಚಾರ
ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ಅವರ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ನನಗೆ ಇಲ್ಲ. ಆದರೆ ಅವರು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ. ಅವರು ದೀರ್ಘಕಾಲ ಆರೋಗ್ಯವಾಗಿರಲಿ. ದೇಶಕ್ಕೂ ಪಕ್ಷಕ್ಕೂ ಅವರ ಅಮೂಲ್ಯ ಸಲಹೆಗಳು ಅತ್ಯಂತ ಅಗತ್ಯ. ಪಕ್ಷ ಸಂಕಷ್ಟದಲ್ಲಿದ್ದಾಗ ಮಾರ್ಗದರ್ಶನ ನೀಡಿದವರು ಸೋನಿಯಾ ಗಾಂಧಿ,” ಎಂದು ಹೇಳಿದರು.






