ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರ ಸಂಖ್ಯೆ ಮತ್ತೊಮ್ಮೆ 100 ಸದಸ್ಯರ ಗಡಿ ದಾಟಿದೆ. ಇತ್ತೀಚೆಗೆ ನಾಮನಿರ್ದೇಶನಗೊಂಡಿದ್ದ ಮೂವರು ಸದಸ್ಯರು ಈ ವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2022ರ ಏಪ್ರಿಲ್ ಬಳಿಕ ಇದೇ ಮೊದಲ ಬಾರಿಗೆ ಕಮಲ ಪಕ್ಷ ಈ ಸಾಧನೆ ಮಾಡಿದೆ. ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಚುನಾವಣೆ
ವಕೀಲ ಉಜ್ವಲ್ ನಿಕಮ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತ ಸಿ ಸದಾನಂದನ್ ಮಾಸ್ಟರ್ ಅವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. ಇವರು ಮೂವರೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಇದರೊಂದಿಗೆ ಮೇಲ್ಮನೆಯಲ್ಲಿ ಪಕ್ಷದ ಸಂಖ್ಯಾಬಲ 102ಕ್ಕೆ ಏರಿಕೆ.
ರಾಜ್ಯಸಭೆಯಲ್ಲಿ ಎನ್ಡಿಎ ಬಲ
ಇವರು ಮೂವರು ಬಿಜೆಪಿಗೆ ಸೇರುವುದರೊಂದಿಗೆ ಬಿಜೆಪಿ ನೇತೃತ್ವದ ಎನ್ಡಿಎ ಬಲ 240 ಸದಸ್ಯ ಬಲದ ರಾಜ್ಯಸಭೆಯಲ್ಲಿ 134ಕ್ಕೆ ಏರಿಕೆಯಾಗಿದೆ. ಇದರಲ್ಲಿ ಆಡಳಿತರೂಢ ಒಕ್ಕೂಟದೊಂದಿಗೆ ಗುರುತಿಸಿಕೊಂಡಿರುವ ಐವರು ನಾಮನಿರ್ದೇಶಿತ ಸಂಸದರೂ ಸೇರಿದ್ದಾರೆ. ಸದ್ಯ ಬಹುಮತಕ್ಕೆ 123 ಸದಸ್ಯರ ಬೆಂಬಲ ಅಗತ್ಯವಿದ್ದು, ಎನ್ಡಿಎ ಮೈತ್ರಿಕೂಟ ಇದಕ್ಕೂ ಹೆಚ್ಚಿನ ಸದಸ್ಯಬಲ ಹೊಂದಿದೆ.
ರಾಜ್ಯಸಭೆ ಇತಿಹಾಸದಲ್ಲಿ ಮೇಲ್ಮನೆಯಲ್ಲಿ 100 ಸದಸ್ಯರ ಸಂಖ್ಯೆಯನ್ನು ಮೀರಿರುವುದು 3ನೇ ಬಾರಿ!
ಭಾರತದ ಸಂಸದೀಯ ಇತಿಹಾಸದಲ್ಲಿ ಒಂದು ರಾಜಕೀಯ ಪಕ್ಷವು ಮೇಲ್ಮನೆಯಲ್ಲಿ 100 ಸದಸ್ಯರ ಸಂಖ್ಯೆಯನ್ನು ಮೀರಿರುವುದು ಇದು ಕೇವಲ ಮೂರನೇ ಬಾರಿ. ಈ ಹಿಂದೆ 1988 ಮತ್ತು 1990ರ ನಡುವೆ ಕಾಂಗ್ರೆಸ್ ಈ ಸಾಧನೆಯನ್ನು ಮಾಡಿತ್ತು. ಬಿಜೆಪಿ ಮೇ 2022ರಲ್ಲಿ 13 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯ ನಂತರ ತನ್ನ ಸಂಖ್ಯಾಬಲವನ್ನು 97 ರಿಂದ 101ಕ್ಕೆ ಹೆಚ್ಚಿಸಿಕೊಂಡು ಮೊದಲ ಬಾರಿಗೆ ಈ ಮೈಲಿಗಲ್ಲನ್ನು ತಲುಪಿತ್ತು. ಆದರೆ, ನಂತರದ ತಿಂಗಳುಗಳಲ್ಲಿ ಈ ಸಂಖ್ಯೆ 99ಕ್ಕೆ ಕುಸಿತ ಕಂಡಿತ್ತು.
ಪ್ರಸ್ತುತ, ರಾಜ್ಯಸಭೆಯಲ್ಲಿ 240 ಸದಸ್ಯರಿದ್ದು, ಐದು ಸ್ಥಾನಗಳು ಖಾಲಿ ಇವೆ. ಈ ಸ್ಥಾನಗಳಿಗೆ ಚುನಾವಣೆ ನಡೆದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಯಾರು ಈ ಹೊಸ ಸದ್ಯಸರು?
26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ, ಅಜ್ಮಲ್ ಕಸಬ್ಗೆ ಶಿಕ್ಷೆ ಆಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು 72 ವರ್ಷದ ಉಜ್ವಲ್ ನಿಕಮ್. 2016ರಲ್ಲಿ ಪದ್ಮಶ್ರೀ ಪುರಸ್ಕೃತರಾದ ಇವರು, 2024ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕೇಂದ್ರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇದರಲ್ಲಿ ಅವರಿಗೆ ಸೋಲಾಗಿತ್ತು.
2020 ರಿಂದ 2022ರವರೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು
ಹರ್ಷವರ್ಧನ್ ಶ್ರಿಂಗ್ಲಾ. 2023ರ ಜಿ20 ಶೃಂಗಸಭೆಯ ಮುಖ್ಯ ಸಂಯೋಜಕರಾಗಿದ್ದ ಇವರು, ಅನುಭವಿ ರಾಜತಾಂತ್ರಿಕರೂ ಹೌದು. ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಸಿ ಸದಾನಂದನ್ ಮಾಸ್ಟರ್ 1994ರಲ್ಲಿ ನಡೆದ ರಾಜಕೀಯ ದಾಳಿಯೊಂದರಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡವರು. ಕೇರಳದ ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣತಜ್ಞರಾಗಿರುವ ಇವರು, ಬಿಜೆಪಿಗೆ ಸೇರಿದ ಕಾರಣಕ್ಕೆ ಸಿಪಿಎಂ ಕಾರ್ಯಕರ್ತರು ಈ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಇವರ ಜೊತೆಗೆ ಇತಿಹಾಸಕಾರರಾದ ಮೀನಾಕ್ಷಿ ಜೈನ್ ಅವರನ್ನೂ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ, ಇವರು ಯಾವುದೇ ರಾಜಕೀಯ ಪಕ್ಷವನ್ನು ಸೇರಿಲ್ಲ.
1 thought on “ಮೇಲ್ಮನೆ ಇತಿಹಾಸದಲ್ಲಿ ವಿಶಿಷ್ಟ ದಾಖಲೆ: ಉಪರಾಷ್ಟ್ರಪತಿ ಚುನಾವಣೆಗೂ ಮುನ್ನ ರಾಜ್ಯಸಭೆಯಲ್ಲಿ 100 ದಾಟಿದ ಬಿಜೆಪಿ ಸಂಖ್ಯಾಬಲ!BJP crosses 100 mark in Rajya Sabha ahead of Vice Presidential election.”