ಆಗ್ರಾದ ಪಾರ್ವತಿ ವಿಹಾರ್ ಪ್ರದೇಶದಲ್ಲಿ ಚೀಲವೊಂದರಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿನಯ್ ರಜಪೂತ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಜನವರಿ 24ರಂದು 25 ವರ್ಷದ ಮಿಂಕಿ ಶರ್ಮಾ ಅವರ ಶವ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಕೇವಲ 12 ಗಂಟೆಗಳೊಳಗೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮಿಂಕಿ ಶರ್ಮಾ ನಾಪತ್ತೆಯಾಗಿದ್ದಾರೆಂದು ಕುಟುಂಬಸ್ಥರು ದೂರು ನೀಡಿದ ನಂತರ, ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಸುಳಿವು ದೊರೆತಿದೆ. ಸಿಸಿಟಿವಿ ಫುಟೇಜ್ನಲ್ಲಿ ಮಿಂಕಿಯ ಸ್ಕೂಟರ್ ಅನ್ನು ಆಕೆಯ ಸಹೋದ್ಯೋಗಿ ವಿನಯ್ ರಜಪೂತ್ ಬಳಸಿರುವುದು ಪತ್ತೆಯಾಗಿದೆ.
ಪೊಲೀಸರ ವಿಚಾರಣೆಯಲ್ಲಿ ವಿನಯ್, ಮಿಂಕಿ ಜೊತೆ ದೀರ್ಘಕಾಲದಿಂದ ಪ್ರೀತಿಸುತ್ತಿದ್ದುದಾಗಿ ಮತ್ತು ಇತ್ತೀಚಿನ ಆರು ತಿಂಗಳಿನಿಂದ ಆಕೆ ಮತ್ತೊಬ್ಬರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಅನುಮಾನದಿಂದ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತೆಂದು ಒಪ್ಪಿಕೊಂಡಿದ್ದಾನೆ. ತಾಳ್ಮೆ ಕಳೆದುಕೊಂಡ ವಿನಯ್, ಮಿಂಕಿಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದಾನೆ ಎಂದು ತಿಳಿಸಿದ್ದಾನೆ.
ಜನವರಿ 23ರಂದು ಕಚೇರಿಗೆ ಮಾತುಕತೆ ಇದೆ ಎಂದು ಮಿಂಕಿಯನ್ನು ಕರೆಸಿಕೊಂಡ ವಿನಯ್, ಇಬ್ಬರ ನಡುವೆ ನಡೆದ ವಾಗ್ವಾದದ ವೇಳೆ ಚಾಕುವಿನಿಂದ ಹಲವು ಬಾರಿ ಇರಿದು ಆಕೆಯನ್ನು ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ತುಂಡು ಮಾಡಿ ಚೀಲದಲ್ಲಿ ತುಂಬಿದ್ದು, ಯಮುನಾ ನದಿಯಲ್ಲಿ ಎಸೆಯಲು ಯತ್ನಿಸಿದ್ದಾನೆ. ಆದರೆ ಚೀಲದ ಭಾರವನ್ನು ಹೊರಲಾಗದ ಕಾರಣ ಜವಾಹರ್ ನಗರದ ಸೇತುವೆಯಿಂದ ದೇಹದ ಭಾಗಗಳನ್ನು ಎಸೆದು ಪರಾರಿಯಾಗಿದ್ದಾನೆ. ಯುವತಿಯ ತಲೆಯನ್ನು ಚರಂಡಿಗೆ ಎಸೆದಿರುವುದಾಗಿ ಆತ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆದರೆ ತಲೆ ಇನ್ನೂ ಪತ್ತೆಯಾಗಿಲ್ಲ.
ಘಟನೆಯ ಬಳಿಕ ಅನುಮಾನ ಬರದಂತೆ ಮಿಂಕಿ ಅವರ ಕುಟುಂಬದವರೊಂದಿಗೆ ವಿನಯ್ ನಿರಂತರವಾಗಿ ಸಂಪರ್ಕದಲ್ಲಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಮಿಂಕಿ ಶರ್ಮಾ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಪೂರ್ಣಗೊಳಿಸಿ ಖಾಸಗಿ ಕಂಪನಿಯೊಂದರಲ್ಲಿ ಎಚ್ಆರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 23ರಂದು ಮಧ್ಯಾಹ್ನ 2 ಗಂಟೆಗೆ ಸಹೋದರನ ಮದುವೆ ಕಾರ್ಡ್ಗಳನ್ನು ಕೊರಿಯರ್ ಮಾಡಲು ಹೊರಡುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಆದರೆ ಸಂಜೆ 8 ಗಂಟೆಯಾದರೂ ಮನೆಗೆ ಮರಳಿರಲಿಲ್ಲ. ಮಿಂಕಿ ಅವರ ಆರನೇ ಅಣ್ಣನ ಮದುವೆ ಫೆಬ್ರವರಿ 6ರಂದು ನಡೆಯಬೇಕಿತ್ತು.





