ಬೆಂಗಳೂರಿನಲ್ಲಿ ಮತ್ತೊಂದು ರಸ್ತೆ ರೌಡಿತನದ ಘಟನೆ ಬೆಳಕಿಗೆ ಬಂದಿದ್ದು, ವ್ಯಕ್ತಿಯನ್ನು ಕಾರಿನ ಬಾನೆಟ್ ಮೇಲೆ ಕೂರಿಸಿಕೊಂಡು ಹೋಗಿದ್ದ ಆರೋಪದ ಹಿನ್ನೆಲೆ ವಾಹನವನ್ನು ಜಪ್ತಿ ಮಾಡಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಮದ್ರಾಸ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಕಾರುಗಳು ಪರಸ್ಪರ ಟಚ್ ಆಗಿದ್ದ ವಿಚಾರಕ್ಕೆ ಎಸ್ಯುವಿ ಚಾಲಕ, ಇನ್ನೊಂದು ವಾಹನದ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಈ ರೀತಿ ಸಾಗಿದ್ದು, ದಾರಿಹೋಕರು ಮೊಬೈಲ್ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹಲಸೂರು ಪ್ರದೇಶದಲ್ಲಿ ಸರಕು ಸಾಗಾಣಿಕೆ ವಾಹನ ಹಾಗೂ ಎಸ್ಯುವಿ ನಡುವೆ ಸಣ್ಣ ಮಟ್ಟಿನ ಸ್ಪರ್ಶ ಸಂಭವಿಸಿದರೂ ಯಾವುದೇ ದೊಡ್ಡ ಹಾನಿ ಆಗಿಲ್ಲ. ಆದರೂ ಮಾತಿನ ಚಕಮಕಿ ತೀವ್ರಗೊಂಡಿದ್ದು, ಇಬ್ಬರು ಚಾಲಕರು ಜಗಳಕ್ಕೆ ಇಳಿದಿದ್ದಾರೆ. ಪರಿಸ್ಥಿತಿ ಬಿಗಡಾಯುತ್ತಿದ್ದಂತೆ ಸರಕು ವಾಹನದ ಚಾಲಕ, ಎಸ್ಯುವಿ ಮುಂದೆ ಹೋಗದಂತೆ ತಡೆಯಲು ಬಾನೆಟ್ ಮೇಲೆ ಹತ್ತಿದ್ದಾನೆ.
ಇದರಿಂದ ಆಕ್ರೋಶಗೊಂಡ ಎಸ್ಯುವಿ ಚಾಲಕ, ಆತನನ್ನು ಕೂರಿಸಿಕೊಂಡೇ ಕಾರು ಚಲಾಯಿಸಿದ್ದಾನೆ.
ಮತ್ತೊಂದು ಕಾರಿನಿಂದ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಸರಕು ವಾಹನದ ಚಾಲಕ ತನ್ನ ಪ್ರಾಣ ಉಳಿಸಿಕೊಳ್ಳಲು ಬಾನೆಟ್ ಹಿಡಿದುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕೆಂಪು ಬಣ್ಣದ ಎಸ್ಯುವಿ ಚಿತ್ರೀಕರಣ ಮಾಡುತ್ತಿದ್ದ ವಾಹನವನ್ನು ಹಿಂದಿಕ್ಕುವ ವೇಳೆ, ಬಾನೆಟ್ ಮೇಲಿರುವ ವ್ಯಕ್ತಿ ಚಾಲಕನಿಗೆ ನಿಲ್ಲಿಸುವಂತೆ ಕೈಚಳಕ ಮೂಲಕ ಸೂಚನೆ ನೀಡುತ್ತಿರುವುದು ದೃಶ್ಯದಲ್ಲಿ ಗೋಚರಿಸುತ್ತದೆ.
ಆದರೆ ಚಾಲಕ ವೇಗವನ್ನು ಕಡಿಮೆ ಮಾಡದೆ, ಇತರ ವಾಹನಗಳನ್ನು ಹಿಂದಿಕ್ಕುತ್ತಾ ಮುಂದುವರಿದಿದ್ದಾನೆ.
ಈ ಸಂಬಂಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಯುವಿ ಚಾಲಕನನ್ನು ಬಂಧಿಸಿ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಚ್ ಆಯಿತು ಎನ್ನುವ ಕಾರಣಕ್ಕೆ ಗಲಾಟೆ…ಅರ್ಧ ಕಿ.ಮೀ ಎಳೆದೊಯ್ದ ಎಸ್ಯುವಿ ಚಾಲಕ ಬಂಧನ!
By krutika naik
On: February 12, 2026 4:09 PM
---Advertisement---





