ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ ಬಂದ ಕೂಡಲೇ ವಿಮಾನ ನಿಲ್ದಾಣದಲ್ಲೇ ಬಂಧನಕ್ಕೊಳಗಾದ ಘಟನೆ ಇನ್ನೂ ಚರ್ಚೆಯಲ್ಲಿರುವಾಗಲೇ, ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಚಿವ ಹಾಗೂ ಕೆ.ಆರ್.ಪುರ ಕ್ಷೇತ್ರದ ಪ್ರಭಾವಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಈ ಕ್ರಮದ ಹಿಂದೆ ಗಂಭೀರ ಆರೋಪಗಳ ನೆರಳು ಇದೆ. ಈ ಅಚಾನಕ್ ಕ್ರಮಕ್ಕೆ ಹಿನ್ನೆಲೆಯಾಗಿರುವುದು ರಾಜಧಾನಿಯಲ್ಲಿ ನಡೆದಿದ್ದ ‘ಬಿಕ್ಲು ಶಿವ’ ಹತ್ಯೆ ಪ್ರಕರಣ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳದ ವೇಳೆ, ಬಿಕ್ಲು ಶಿವನನ್ನು ಆತನ ಮನೆಯ ಎದುರೇ ಐದು-ಆರು ಮಂದಿಯ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು.
ಇದನ್ನು ಓದಿ: ರಾತ್ರಿ ಮಲಗಿದ್ದಳು… ಬೆಳಿಗ್ಗೆ ಎದ್ದು ನೋಡಿದ್ರೆ ಮಂಚದ ಮೇಲೆ ಹಾವಿನ ಪೊರೆ!! ನಾಪತ್ತೆಯಾದ ಯುವತಿಗೆ ಏನಾಯಿತು?
ಇದನ್ನು ಓದಿ ಭಾರತದ ಮೊದಲ ಸಂಗೀತ ರಸ್ತೆ ಎಲ್ಲಿದೆ ಗೊತ್ತಾ? ಇದರ ಸ್ಪೆಷಾಲಿಟಿ ಕೇಳಿದ್ರೆ ಶಾಕ್ ಆಗ್ತೀರಾ!!
ಪ್ರಕರಣದ ತನಿಖೆ ಕೈಗೊಂಡಿರುವ ಸಿಐಡಿಗೆ, ಈ ದಾಳಿ ನಡೆಸಿದವರು ಬೈರತಿ ಬಸವರಾಜ್ ಅವರ ಆಪ್ತ ವಲಯದವರೇ ಎಂಬ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣದಲ್ಲಿ ಶಾಸಕರ ನೇರ ಅಥವಾ ಪರೋಕ್ಷ ಸಂಬಂಧವಿದೆಯೇ ಎಂಬ ಅನುಮಾನ ಮೂಡಿದ್ದು, ಅವರ ವಿಚಾರಣೆ ಅಗತ್ಯವಾಗಿದೆ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇಂದು ಬೈರತಿ ಬಸವರಾಜ್ ಅಹಮದಾಬಾದ್ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಐಡಿಗೆ ಸಿಕ್ಕಿತ್ತು. ಅದನ್ನು ಆಧರಿಸಿ ದೇವನಹಳ್ಳಿ ಎಸಿಪಿ ಹರ್ಷ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಹಾಗೂ ಸಿಐಡಿ ವಿಶೇಷ ದಳ ವಿಮಾನ ನಿಲ್ದಾಣಕ್ಕೆ ತೆರಳಿತ್ತು. ಶಾಸಕರು ಬಂದಿಳಿಯುವ ಮುನ್ನವೇ ಟರ್ಮಿನಲ್ 1ರ ಸುತ್ತಮುತ್ತ ಕಠಿಣ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ಅನಾಹುತ ತಪ್ಪಿಸಲು ಕೆಎಸ್ಆರ್ಪಿ ಸಿಬ್ಬಂದಿಯನ್ನೂ ಮುನ್ನೆಚ್ಚರಿಕೆಯಿಂದ ನಿಯೋಜಿಸಲಾಗಿತ್ತು.
ಅಹಮದಾಬಾದ್ನಿಂದ ಬಂದ ಇಂಡಿಗೋ ವಿಮಾನ ಸಂಜೆ ವೇಳೆಗೆ ಬೆಂಗಳೂರಿಗೆ ತಲುಪಿದ ತಕ್ಷಣವೇ ಪೊಲೀಸರು ಚಟುವಟಿಕೆಗೆ ಇಳಿದರು. ವಿಮಾನದಲ್ಲೇ ಪ್ರವೇಶಿಸಿದ ಸಿಐಡಿ ಅಧಿಕಾರಿಗಳು, ಬೈರತಿ ಬಸವರಾಜ್ ಅವರನ್ನು ಟರ್ಮಿನಲ್ ಒಳಗಡೆಯೇ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಇದ್ದ ಜನರಲ್ಲಿ ಕುತೂಹಲ ಹಾಗೂ ಚರ್ಚೆಗಳು ಜೋರಾಗಿದ್ದವು.
ಪ್ರಸ್ತುತ ಸಿಐಡಿ ಅಧಿಕಾರಿಗಳು ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಕೊಲೆ ಆರೋಪಿಗಳೊಂದಿಗೆ ಶಾಸಕರಿಗೆ ಇದ್ದ ಸಂಪರ್ಕ ಹಾಗೂ ಆಸ್ತಿ ವಿವಾದದಲ್ಲಿ ಅವರ ಪಾತ್ರದ ಬಗ್ಗೆ ಸವಿಸ್ತಾರವಾಗಿ ಪ್ರಶ್ನೆಗಳು ಕೇಳಲಾಗುವ ಸಾಧ್ಯತೆ ಇದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಪಕ್ಷದ ಪ್ರತಿಕ್ರಿಯೆ ಏನಾಗಲಿದೆ ಎಂಬುದರ ಮೇಲೆ ಎಲ್ಲರ ಕಣ್ಣೂ ನೆಟ್ಟಿದೆ.
ಇದನ್ನು ಓದಿ: 10 ವರ್ಷಗಳ ಬಳಿಕ ದೇಶದಲ್ಲಿ ಮತ್ತೆ ಪರಿಚಯವಾಗುತ್ತಿದೆ 1 ವರ್ಷದ B.Ed. ಕೋರ್ಸ್





