ಕೇವಲ 20 ರೂಪಾಯಿ ಲಂಚ ಸ್ವೀಕರಿಸಿದ್ದಾರೆಯೆಂಬ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಸುಮಾರು ಮೂರು ದಶಕಗಳ ಕಾಲ ಜೈಲು ಶಿಕ್ಷೆಯ ಸಂಕಷ್ಟ ಅನುಭವಿಸಿದ್ದ ಪೊಲೀಸ್ ಪೇದೆ, ತಾನು ನಿರಪರಾಧಿ ಎಂಬ ತೀರ್ಪು ಬಂದ ತಕ್ಷಣವೇ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಗುಜರಾತ್ನಲ್ಲಿ ನಡೆದಿದೆ.
ಅಹಮದಾಬಾದ್ನಲ್ಲೇ ನಡೆದ ಈ ಪ್ರಕರಣದಲ್ಲಿ, ಬಾಬುಭಾಯಿ ಪ್ರಜಾಪತಿ ಎಂಬ ಪೊಲೀಸ್ ಪೇದೆಗೆ 20 ರೂಪಾಯಿ ಲಂಚದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ವರ್ಷಗಳ ನಂತರ ಅವರು ತಪ್ಪು ಮಾಡಿಲ್ಲ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅದೃಷ್ಟವಶಾತ್ ಆ ತೀರ್ಪಿನ ಮಾರನೇ ದಿನವೇ ಅವರು ವಿಧಿವಶರಾಗಿದ್ದಾರೆ.
ಇದನ್ನು ಓದಿ: ಲ್ಯಾಪ್ಟಾಪ್ ಬ್ಯಾಟರಿ ಸ್ಫೋಟ: 20 ವರ್ಷದ ಯುವಕ ಸಾವು, ಸಹೋದರಿಗೆ ಗಾಯ
ಇದನ್ನು ಓದಿ: ಬಸ್ನಲ್ಲಿ ಮಹಿಳೆಗೆ ಸ್ಪರ್ಶದ ಆರೋಪ, ವೀಡಿಯೊ ವೈರಲ್… ಮನನೊಂದ ವ್ಯಕ್ತಿ ಆತ್ಮಹತ್ಯೆ…!
1997ರಲ್ಲಿ ವೆಜಲ್ಪುರ ಪ್ರದೇಶದ ವಿಶಾಲ ಬಳಿ ನಡೆದ ಘಟನೆಯೊಂದರಲ್ಲಿ, ಪ್ರಜಾಪತಿ ಎಸಿಬಿ ಬಲೆಗೆ ಬಿದ್ದಿದ್ದರು. ಆ ವೇಳೆ ಟ್ರಕ್ ಚಾಲಕರಿಂದ ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಮೂವರು ಪೊಲೀಸ್ ಕಾನ್ಸ್ಟೆಬಲ್ಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ದೀರ್ಘ ಕಾಲ ಕಾನೂನು ಹೋರಾಟ ಮುಂದುವರಿದಿತ್ತು.
2004ರಲ್ಲಿ ಸೆಷನ್ಸ್ ನ್ಯಾಯಾಲಯವು ಆರೋಪಿಗಳೆಲ್ಲರನ್ನೂ ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿತು. ಈ ತೀರ್ಪಿನ ವಿರುದ್ಧ ಎಲ್ಲರೂ ಮೇಲ್ಮನವಿ ಸಲ್ಲಿಸಿದರು. ವರ್ಷಗಳ ಕಾಲ ವಿಚಾರಣೆ ಮುಂದುವರಿದ ಬಳಿಕ, ಕೊನೆಗೂ ಬಾಬುಭಾಯಿ ಪ್ರಜಾಪತಿ ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸಿತು.
ಅಹಮದಾಬಾದ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಜಾಪತಿ ಮತ್ತು ಇತರ ಪೇದೆಗಳ ಮೇಲೆ ಟ್ರಕ್ ಚಾಲಕರಿಂದ 20 ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದ್ದು, 1997ರಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. 2002ರಲ್ಲಿ ಆರೋಪಗಳು ರೂಪುಗೊಂಡು, 2003ರಲ್ಲಿ ಸಾಕ್ಷಿಗಳ ವಿಚಾರಣೆ ಆರಂಭವಾಯಿತು. ಅಂತಿಮವಾಗಿ 2004ರಲ್ಲಿ ಸೆಷನ್ಸ್ ನ್ಯಾಯಾಲಯವು ಪ್ರಜಾಪತಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ 3,000 ರೂಪಾಯಿ ದಂಡ ವಿಧಿಸಿತು.
ಈ ತೀರ್ಪನ್ನು ಪ್ರಶ್ನಿಸಿ ಪ್ರಜಾಪತಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ ಅವರ ಮೇಲ್ಮನವಿ ವಿಚಾರಣೆ 22 ವರ್ಷಗಳ ಕಾಲ ಬಾಕಿ ಉಳಿಯಿತು. ಈ ವರ್ಷ ಫೆಬ್ರವರಿ 4ರಂದು ಹೈಕೋರ್ಟ್ ತೀರ್ಪು ಪ್ರಕಟಿಸಿ, ಸಾಕ್ಷಿಗಳ ಹೇಳಿಕೆಗಳಲ್ಲಿ ಗಂಭೀರ ವಿರೋಧಾಭಾಸಗಳಿರುವುದನ್ನು ಉಲ್ಲೇಖಿಸಿ, ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿದೆ. ಪ್ರಜಾಪತಿ ಪರ ವಾದ ಮಂಡಿಸಿದ ವಕೀಲ ನಿತಿನ್ ಗಾಂಧಿ, ಇಡೀ ಪ್ರಕರಣವೇ ಅನುಮಾನಗಳಿಂದ ಕೂಡಿದೆ ಎಂದು ವಾದಿಸಿದ್ದರು.
ತೀರ್ಪಿನ ಬಳಿಕ ಪ್ರಜಾಪತಿ ತಮ್ಮ ವಕೀಲರ ಕಚೇರಿಗೆ ಆರೋಪಿಯಾಗಿ ಅಲ್ಲ, ಸ್ವತಂತ್ರ ವ್ಯಕ್ತಿಯಾಗಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಕೀಲರು ವರ್ಷಗಳಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಸೌಲಭ್ಯಗಳು ಹಾಗೂ ಬಾಕಿ ಸೇವಾ ಲಾಭಗಳಿಗಾಗಿ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು. ಆದರೆ ಪ್ರಜಾಪತಿ ಅತ್ಯಂತ ಶಾಂತ ಮನಸ್ಥಿತಿಯಲ್ಲಿ, ತಮ್ಮ ಜೀವನಕ್ಕೆ ಅಂಟಿಕೊಂಡಿದ್ದ ಕಳಂಕ ಕೊನೆಗೂ ದೂರವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
“ಈಗ ದೇವರು ನನ್ನನ್ನು ಕರೆದುಕೊಂಡು ಹೋದರೂ ನನಗೆ ಯಾವುದೇ ಬೇಸರ ಇಲ್ಲ” ಎಂದು ಅವರು ಹೇಳಿದ್ದೇ ವಕೀಲರೊಂದಿಗೆ ನಡೆದ ಕೊನೆಯ ಮಾತುಕತೆ ಎಂದು ತಿಳಿದುಬಂದಿದೆ.
ಆದರೆ ವಿಧಿಯ ಆಟವೆಂಬಂತೆ, ಈ ನ್ಯಾಯತೀರ್ಪು ಬಂದ ಮಾರನೇ ದಿನವೇ ಪ್ರಜಾಪತಿ ವಯೋಸಹಜ ಕಾರಣಗಳಿಂದ ಸಾವಿಗೀಡಾಗಿದ್ದಾರೆ. ವಕೀಲ ನಿತಿನ್ ಗಾಂಧಿ ಹೇಳುವಂತೆ, ಖುಲಾಸೆಯಾದ ನಂತರ ಪ್ರಜಾಪತಿ ನಿಜಕ್ಕೂ ಮನಸ್ಸು ತುಂಬಿ ಸಂತೋಷಗೊಂಡಿದ್ದರು. ಬಾಕಿ ಸೌಲಭ್ಯಗಳ ಬಗ್ಗೆ ಚರ್ಚೆ ನಡೆದಿದ್ದರೂ, ಮರುದಿನ ದಾಖಲೆಗಳನ್ನು ನೀಡಲು ಸಂಪರ್ಕಿಸಿದಾಗ ಅವರ ನಿಧನದ ಸುದ್ದಿ ತಿಳಿದು ಬಂದಿದೆ.






