ಕಾನ್ಫಿಡೆಂಟ್ ಗ್ರೂಪ್ನ ಚೇರ್ಮನ್ ಹಾಗೂ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ತಮ್ಮ ಬಂಗಲೆಯಲ್ಲಿ ಪಿಸ್ತೂಲ್ ಬಳಸಿ ಈ ದುರ್ಘಟನೆ ಸಂಭವಿಸಿದ್ದು, ಐಟಿ ದಾಳಿಯ ಒತ್ತಡದಿಂದ ಅವರು ಈ ತೀರ್ಮಾನ ಕೈಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನು ಓದಿ: ಬಸ್ನಲ್ಲಿ ಮಹಿಳೆಗೆ ಸ್ಪರ್ಶದ ಆರೋಪ, ವೀಡಿಯೊ ವೈರಲ್… ಮನನೊಂದ ವ್ಯಕ್ತಿ ಆತ್ಮಹತ್ಯೆ…!
ಇದನ್ನು ಓದಿ: ಗರ್ಭಿಣಿ ಸೊಸೆ ಕೊಲೆ ಪ್ರಕರಣ: ಆಸ್ತಿ ಲಾಲಸೆಯೇ ಭೀಕರ ಕೃತ್ಯಕ್ಕೆ ಕಾರಣ, ವಿಚಾರಣೆಯಲ್ಲಿ ಆರೋಪಿ ಬಾಯ್ಬಿಟ್ಟ ಸತ್ಯ
ಅವರ ನಿವಾಸದ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಘಟನೆಯ ಬಳಿಕ ಅಶೋಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರದಲ್ಲಿ ಅವರ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್ಗಳು ಮತ್ತು ರೆಸಾರ್ಟ್ಗಳು ಇದ್ದು, ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತ ಉದ್ಯಮಿಗೆ ಪತ್ನಿ ಲಿನಿ ರಾಯ್ ಹಾಗೂ ರೋಹಿತ್ ಮತ್ತು ರಿಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ಪುತ್ರ ರೋಹಿತ್ ಅವರು ಕಾನ್ಫಿಡೆಂಟ್ ಗ್ರೂಪ್ನ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಿನ್ಯಾಸ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಐಟಿ ದಾಳಿಯ ಭಯವೇ ಆತ್ಮಹತ್ಯೆಗೆ ಕಾರಣವೇ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಈ ಹಿಂದೆಯೂ ಹಲವು ಬಾರಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳು ಹಾಗೂ ಸಿ.ಜೆ. ರಾಯ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಪದೇಪದೇ ನಡೆಯುತ್ತಿದ್ದ ಈ ದಾಳಿಗಳಿಂದ ಅವರು ಮಾನಸಿಕವಾಗಿ ನೊಂದುಕೊಂಡಿದ್ದರು ಎನ್ನಲಾಗುತ್ತಿದೆ.
ಗುರುವಾರ ಬೆಳಗ್ಗೆ ನಡೆದ ಐಟಿ ದಾಳಿ ವೇಳೆ ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಲಾಗಿದ್ದು, ನಂತರ ಇನ್ನಷ್ಟು ದಾಖಲೆ ತರಲು ಕೊಠಡಿಗೆ ತೆರಳಿದ ಸಂದರ್ಭ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಾನ್ಫಿಡೆಂಟ್ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದ ಡಾ. ಸಿ.ಜೆ. ರಾಯ್ ದಕ್ಷಿಣ ಭಾರತದ ಪ್ರಮುಖ ಬಿಲ್ಡರ್ಗಳು ಮತ್ತು ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಕೇರಳದ ಕೊಚ್ಚಿ ಮೂಲದವರಾದ ಅವರು ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ರಿಯಲ್ ಎಸ್ಟೇಟ್, ಶಿಕ್ಷಣ, ಆತಿಥ್ಯ ಹಾಗೂ ಮನರಂಜನಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ವ್ಯವಹಾರ ನಡೆಸುತ್ತಿದ್ದರು.
ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಶಿಕ್ಷಣ ಪಡೆದ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ವೃತ್ತಿ ಜೀವನ ಆರಂಭಿಸಿ, ನಂತರ ಭಾರತದಲ್ಲಿ ಕಾನ್ಫಿಡೆಂಟ್ ಗ್ರೂಪ್ ಮೂಲಕ ದಕ್ಷಿಣ ಭಾರತದಾದ್ಯಂತ ತಮ್ಮ ಉದ್ಯಮವನ್ನು ವಿಸ್ತರಿಸಿದ್ದರು. ಅವರು ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದು, ಮೋಹನ್ಲಾಲ್ ಅಭಿನಯದ ‘ಕ್ಯಾಸನೋವಾ’ ಸೇರಿದಂತೆ ಸುಮಾರು 11 ಚಿತ್ರಗಳನ್ನು ನಿರ್ಮಿಸಿದ್ದರು. ‘ಮರಕ್ಕಾರ್’ ಎಂಬ ಅತಿ ದೊಡ್ಡ ಬಜೆಟ್ನ ಮಲಯಾಳಂ ಚಿತ್ರಕ್ಕೂ ಅವರು ನಿರ್ಮಾಪಕರಾಗಿದ್ದರು.
2006ರಲ್ಲಿ ‘ಐಡಿಯಾ ಸ್ಟಾರ್ ಸಿಂಗರ್’ ಎಂಬ ಜನಪ್ರಿಯ ಟಿವಿ ರಿಯಾಲಿಟಿ ಶೋಗೆ ಹಣಕಾಸು ನೆರವು ನೀಡುವ ಮೂಲಕ ಕಾನ್ಫಿಡೆಂಟ್ ಗ್ರೂಪ್ಗೆ ಹೆಚ್ಚಿನ ಪ್ರಚಾರ ತಂದಿದ್ದರು. ಬಿಗ್ ಬಾಸ್ ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ರಿಯಾಲಿಟಿ ಕಾರ್ಯಕ್ರಮಗಳಿಗೆ ಅವರ ಸಂಸ್ಥೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು.






