ಸಿನಿಮಾ ಎನ್ನುವುದು ಜಗತ್ತಿನಾದ್ಯಂತ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಅದರಲ್ಲೂ ಕೆಲವು ಪಾತ್ರಗಳು ಪ್ರೇಕ್ಷಕರ ಮನಸ್ಸನ್ನು ಅಷ್ಟೊಂದು ಆಳವಾಗಿ ತಟ್ಟುತ್ತವೆ ಎಂದರೆ ಅವು ಕಾಲದ ಹಾದಿಯಲ್ಲಿ ಎಂದಿಗೂ ಮಸುಕಾಗುವುದಿಲ್ಲ. ಕೆಲ ಸಿನಿಮಾಗಳಲ್ಲಿ ನಿರ್ದೇಶಕರು ಪಾತ್ರಗಳನ್ನು ಅಷ್ಟು ನಿಖರವಾಗಿ ರೂಪಿಸುತ್ತಾರೆ, ಆ ಪಾತ್ರಗಳೇ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತವೆ. ಇಂತಹ ಪಾತ್ರಗಳ ಕಾರಣದಿಂದಲೇ ಆ ಚಿತ್ರಕ್ಕೆ ದೊಡ್ಡ ಹೆಸರು, ಗೌರವ ಮತ್ತು ಶಾಶ್ವತ ಸ್ಥಾನ ಸಿಗುತ್ತದೆ.
ಅವರಿಗಾಗಿಯೇ ಹುಟ್ಟಿದ ಪಾತ್ರ
ಕೆಲವು ಪಾತ್ರಗಳಲ್ಲಿ ನಟರ ಅಭಿನಯ ಅಷ್ಟೊಂದು ಪರಿಣಾಮಕಾರಿಯಾಗಿರುತ್ತದೆ ಎಂದರೆ, ಆ ಪಾತ್ರವನ್ನು ಅವರ ಹೊರತು ಬೇರೆ ಯಾರೂ ಮಾಡಲಾಗುವುದೇ ಇಲ್ಲ ಎನ್ನುವಂತಾಗುತ್ತದೆ. ಆ ರೋಲ್ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿ, “ಇದು ಅವರಿಗಾಗಿಯೇ ಮಾಡಿದ ಪಾತ್ರ” ಎಂದು ಜನರು ಹೇಳುವ ಮಟ್ಟಿಗೆ ಪ್ರಸಿದ್ಧಿಯಾಗುತ್ತದೆ. ಇಂಥದೇ ಒಂದು ಚಿತ್ರ ಮತ್ತು ಪಾತ್ರದ ಕಥೆಯೇ ಇದು.
ಆ ಪಾತ್ರದಲ್ಲಿ ನಟಿಸಿದ್ದವರು ಅಪ್ಪಟ ಕನ್ನಡದ ಪ್ರತಿಭಾವಂತ ನಟ. 2012ರಲ್ಲಿ ಬಿಡುಗಡೆಯಾದ ಒಂದು ಫ್ಯಾಂಟಸಿ ಆಕ್ಷನ್ ಸಿನಿಮಾ. ಆ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿ ದಾಖಲೆಗಳನ್ನು ನಿರ್ಮಿಸಿತು. ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಸಿನಿಮಾ ಅಂದಿನ ಕಾಲಕ್ಕೆ ಹೊಸ ಪ್ರಯೋಗವಾಗಿದ್ದು, ಜಗತ್ತಿನ ಯಾವುದೇ ಭಾಷೆಯಲ್ಲೂ ಇಂತಹ ಕಾನ್ಸೆಪ್ಟ್ನ ಸಿನಿಮಾ ಬಂದಿರಲಿಲ್ಲ. ಚಿತ್ರದ ನಾಯಕನಾಗಿ ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ, ನಾಯಕಿಯಾಗಿ ಸಮಂತಾ ಅಭಿನಯಿಸಿದ್ದರು. ಚಿತ್ರದ ಹೆಸರು – ‘ಈಗ’ (Eega).
‘ಈಗ’ ಚಿತ್ರದಲ್ಲಿ ಚಿತ್ರವೇ ಬದಲಾಗಿತ್ತು
ಆ ಸಮಯದಲ್ಲಿ ನಾನಿ ಮತ್ತು ಸಮಂತಾ ತೆಲುಗು ಚಿತ್ರರಂಗದ ಟಾಪ್ ನಟರಾಗಿದ್ದರು. ಅವರ ಸಿನಿಮಾಗಳಲ್ಲಿ ಅವರದ್ದೇ ಮೇಲುಗೈ ಇರುತ್ತಿತ್ತು. ಆದರೆ ‘ಈಗ’ ಸಿನಿಮಾದಲ್ಲಿ ಚಿತ್ರ ಸಂಪೂರ್ಣವಾಗಿ ಬೇರೆಯದೇ ತಿರುವು ಪಡೆದುಕೊಂಡಿತು. ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅದ್ಭುತ ಅಭಿನಯ ನೀಡಿ ಎಲ್ಲರ ಗಮನ ಸೆಳೆದರು.
ಸುದೀಪ್ ಅವರ ನಟನೆ ಅಷ್ಟೊಂದು ಶಕ್ತಿಯುತವಾಗಿತ್ತು ಎಂದರೆ, ಚಿತ್ರದಲ್ಲಿ ಅವರ ಹೊರತು ಬೇರೆ ಯಾರೂ ಹೈಲೈಟ್ ಆಗಲೇ ಸಾಧ್ಯವಾಗಲಿಲ್ಲ. ಪ್ರತಿಯೊಂದು ದೃಶ್ಯದಲ್ಲೂ ಸುದೀಪ್ ತಮ್ಮದೇ ಛಾಪು ಮೂಡಿಸಿದರು. ಪ್ರೇಕ್ಷಕರು ನಾಯಕ ನಾನಿಯನ್ನು ಹೊಗಳುವ ಬದಲು, ಸುದೀಪ್ ಅವರ ಅಭಿನಯ ನೋಡಿ “ವಾವ್, ಫ್ಯಾಂಟಾಸ್ಟಿಕ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುದೀಪ್ ಪಾತ್ರದ ಲೆವೆಲ್ ಸಂಪೂರ್ಣವಾಗಿ ಬೇರೆ ಆಯಾಮದಲ್ಲಿತ್ತು.
ರಾಜಮೌಳಿ ಬಳಸಿಕೊಂಡ ಅದ್ಭುತ ಪ್ರತಿಭೆ
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಸುದೀಪ್ ಅವರ ನಟನಾ ಸಾಮರ್ಥ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡರು. ‘ಈಗ’ ಎಂದರೆ ತೆಲುಗಿನಲ್ಲಿ ನೊಣ. ಈ ಚಿತ್ರದಲ್ಲಿ ಸುದೀಪ್ ತಮ್ಮ ಎದುರು ನೊಣ ಇದೆ ಎಂದು ಕಲ್ಪಿಸಿಕೊಂಡೇ ಅಭಿನಯ ಮಾಡಬೇಕಾಗಿತ್ತು. ಇದು ಅತ್ಯಂತ ಕಷ್ಟದ ಕೆಲಸ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಸುದೀಪ್ ಆ ಸವಾಲನ್ನು ಲೀಲಾಜಾಲವಾಗಿ ಎದುರಿಸಿ, ಪಾತ್ರಕ್ಕೆ ಜೀವ ತುಂಬಿದರು.
ಈ ಸಿನಿಮಾದಲ್ಲಿನ ಅವರ ಅಭಿನಯಕ್ಕಾಗಿ ಸುದೀಪ್ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದವು. ತೆಲಂಗಾಣ ಸರ್ಕಾರವು ಪ್ರತಿಷ್ಠಿತ ನಂದಿ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತು. ಈ ಚಿತ್ರದ ಮೂಲಕ ಸುದೀಪ್ ಅವರ ಖ್ಯಾತಿ ರಾಷ್ಟ್ರಮಟ್ಟದಲ್ಲಿ ಹೆಚ್ಚಾಯಿತು. ತಮ್ಮ ಶುದ್ಧ ಪ್ರತಿಭೆಯಿಂದಲೇ ಎಲ್ಲರ ಗಮನ ಸೆಳೆದ ಕಿಚ್ಚ ಸುದೀಪ್, ‘ಅಭಿನಯ ಚಕ್ರವರ್ತಿ’ ಎಂಬ ಬಿರುದಿಗೆ ಇನ್ನಷ್ಟು ನ್ಯಾಯ ಒದಗಿಸಿದರು.






