ಹುಬ್ಬಳ್ಳಿಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆ: ಎಂಜಿನಿಯರ್ ವಿಠ್ಠಲ್ ರಾಠೋಡ್ ಚಿಕಿತ್ಸೆ ಫಲಿಸದೆ ಸಾವು
ಹುಬ್ಬಳ್ಳಿ, ಜನವರಿ 12: ಮಹಿಳೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರಿಂದ ಗಂಭೀರ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ ವಿಠ್ಠಲ್ ರಾಠೋಡ್ (60) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಜನವರಿ 10ರಂದು ಈ ಹಲ್ಲೆ ನಡೆದಿತ್ತು. ಆರೋಪಿಗಳು ಹಲ್ಲೆ ನಡೆಸಿದ ಬಳಿಕ ಮದ್ಯ ಸೇವಿಸಿ ಬಿದ್ದು ಗಾಯಗೊಂಡಿರುವಂತೆ ನಾಟಕವಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಠ್ಠಲ್ ರಾಠೋಡ್ ಬಳಿ ಕಳೆದ 4–5 ವರ್ಷಗಳಿಂದ ಛತ್ತೀಸ್ಗಢ ಮೂಲದ ಒಂದು ಕುಟುಂಬ ಕೆಲಸ ಮಾಡುತ್ತಿತ್ತು. ಆ ಕುಟುಂಬದ ಸದಸ್ಯೆ ವಿಮಲಾ ಜೊತೆ ವಿಠ್ಠಲ್ ರಾಠೋಡ್ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಹಿಂದೆಯೂ ಹಲವು ಬಾರಿ ಜಗಳಗಳು ನಡೆದಿದ್ದವು.
ಜನವರಿ 10ರ ರಾತ್ರಿ ಕೂಡ ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಆ ವೇಳೆ ಮೇಘವ್ ಮತ್ತು ಭಗವಾನದಾಸ್ ಎಂಬವರು ವಿಠ್ಠಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮದ್ಯಪಾನದಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಸುಳ್ಳು ಕಥೆ ಕಟ್ಟಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿಠ್ಠಲ್ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ ಎರಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿ :https://karnatakastories.in/bengaluru-software-engineer-killed-flat-set-on-fire/
ಘಟನೆ ಕುರಿತು ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ. ಛತ್ತೀಸ್ಗಢ ಮೂಲದ ದಂಪತಿ ಹಾಗೂ ಅವರ ಮಗ ಸೇರಿಕೊಂಡು ವಿಜಯಪುರ ಜಿಲ್ಲೆಯ ಅರಕೇರಾ ತಾಂಡಾ ಮೂಲದ ನಿವಾಸಿ ವಿಠ್ಠಲ್ ರಾಠೋಡ್ ಅವರನ್ನು ಹತ್ಯೆ ಮಾಡಿರುವುದು ದೃಢಪಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮೇಘವ್, ಭಗವಾನದಾಸ್ ಹಾಗೂ ವಿಮಲಾಳನ್ನು ಬಂಧಿಸಲಾಗಿದ್ದು, ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






