ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟಾ ಸಮೀಪದ ಕಲ್ಲಾಡಿ–ಸೈಬ್ರಕಟ್ಟೆ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಸ್ಕೂಟರ್ಗೆ ಅಲ್ಪ ಪ್ರಮಾಣದ ಹಾನಿಯಾದ ಕಾರಣ ಕುಟುಂಬದವರು ಏನಾದರೂ ಅನ್ನುವ ಭಯದಿಂದ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಇದನ್ನು ಓದಿ: ಇನ್ಸ್ಪೆಕ್ಟರ್ಗೆ ಅತಿರೇಕದ ಪ್ರೇಮ ಕಾಟ: ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ ಎಫ್ಐಆರ್
ಮೃತ ವಿದ್ಯಾರ್ಥಿಯನ್ನು ವಂಶಿಕ್ (17) ಎಂದು ಗುರುತಿಸಲಾಗಿದ್ದು, ಆತ ಮಂಜುನಾಥ ಮತ್ತು ಸೌಮ್ಯ ಶೆಟ್ಟಿಗಾರ್ ದಂಪತಿಯ ಪುತ್ರ. ವಂಶಿಕ್ ಕುಂದಾಪುರ ಸಮೀಪದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಪೊಲೀಸರ ಮಾಹಿತಿಯಂತೆ, ಮನೆಯೊಂದರಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಂಬಂಧಿಕರೊಬ್ಬರು ಸ್ಕೂಟರ್ ಅನ್ನು ಮನೆ ಬಳಿ ನಿಲ್ಲಿಸಿದ್ದರು. ಈ ವೇಳೆ ವಂಶಿಕ್ ಸ್ಕೂಟರ್ ಚಲಾಯಿಸಲು ಪ್ರಯತ್ನಿಸಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸ್ಕೂಟರ್ಗೆ ಸ್ವಲ್ಪ ಹಾನಿಯಾಗಿದೆ. ಈ ವಿಚಾರಕ್ಕೆ ಕುಟುಂಬದವರಿಂದ ಏನ್ ಆದರೂ ಹೆದರಿಕೆ ಎದುರಾಗಬಹುದೆಂಬ ಭಯದಿಂದ ಆತ ಮನೆ ಬಿಟ್ಟು ತೆರಳಿದ್ದಾನೆ ಎನ್ನಲಾಗಿದೆ.
ನಂತರ ಮನೆಯವರು ಹುಡುಕಾಟ ನಡೆಸಿದಾಗ ಸ್ಕೂಟರ್, ಮೊಬೈಲ್ ಫೋನ್ ಮತ್ತು ಹೆಲ್ಮೆಟ್ ಪತ್ತೆಯಾಗಿದೆ. ಬಳಿಕ ಮನೆಯ ಸಮೀಪದ ಕೃಷಿ ಕೆರೆಯ ಬಳಿ ವಂಶಿಕ್ನ ಚಪ್ಪಲಿ ಮತ್ತು ಅಂಗಿ ದೊರೆತಿದ್ದು, ಶೋಧ ಕಾರ್ಯದ ವೇಳೆ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.
ವಂಶಿಕ್ ಮೃದುಸ್ವಭಾವದ ವಿದ್ಯಾರ್ಥಿಯಾಗಿದ್ದ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ತಿಳಿಸಿದ್ದಾರೆ. ಸ್ಕೂಟರ್ಗೆ ಹೆಚ್ಚಿನ ಹಾನಿಯೂ ಆಗಿರಲಿಲ್ಲ, ಕುಟುಂಬದವರು ಕಠಿಣವಾಗಿಯೂ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೂ ಆತ ತೆಗೆದುಕೊಂಡ ಈ ಅತಿಯಾದ ನಿರ್ಧಾರ ಎಲ್ಲರನ್ನೂ ಕಂಬನಿಗೀಡು ಮಾಡಿದೆ.







1 thought on “ಸ್ಕೂಟರ್ಗೆ ಸ್ವಲ್ಪ ಹಾನಿಯಾದ ಭಯಕ್ಕೆ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ”
Comments are closed.