ಬಳ್ಳಾರಿ: ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಸೇರಿದಂತೆ ಒಟ್ಟು 11 ಜನರ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಿನ್ನೆ ಜನಾರ್ದನ ರೆಡ್ಡಿ ಅವರ ನಿವಾಸದ ಎದುರು ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬ್ಯಾನರ್ ಕಟ್ಟುವ ವೇಳೆ, ಜನಾರ್ದನ ರೆಡ್ಡಿ ಹಾಗೂ ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಗಂಭೀರ ಗಲಾಟೆಗೆ ತಿರುಗಿದೆ. ಈ ವೇಳೆ ಶಾಸಕ ಭರತ್ ರೆಡ್ಡಿ ಅವರ ಆಪ್ತರಾದ ಸತೀಶ್ ರೆಡ್ಡಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಸಂಬಂಧ ಶಾಸಕ ಭರತ್ ರೆಡ್ಡಿಯವರ ಆಪ್ತ ಚಾನಾಳ್ ಶೇಖರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಬ್ಯಾನರ್ ಕಿತ್ತು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಫ್ಐಆರ್ ದಾಖಲಾಗಿರುವವರ ಪಟ್ಟಿ:
ಜನಾರ್ದನ ರೆಡ್ಡಿ ಸೋಮಶೇಖರ್ ರೆಡ್ಡಿ ಶ್ರೀರಾಮುಲು ಮೋತ್ಕರ್ ಶ್ರೀನಿವಾಸ್ ಪ್ರಕಾಶ್ ರೆಡ್ಡಿ ರಮಣ ಪಾಲಣ್ಣ ದಿವಾಕರ್ ಮಾರುತಿ ಪ್ರಸಾದ್ ದಮ್ಮೂರ್ ಶೇಖರ್ ಅಲಿಖಾನ್
ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಲ್ಲು, ಕಟ್ಟಿಗೆ, ಮಚ್ಚುಗಳು ಹಾಗೂ ಸೋಡಾ ಬಾಟಲಿಗಳನ್ನು ಹಿಡಿದು ಗುಂಪು ಗುಂಪಾಗಿ ಬಂದು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಘಟನೆ ಸ್ಥಳದಲ್ಲಿ ಶಾಂತ ವಾತಾವರಣ
ಗಲಾಟೆ ನಡೆದ ಜನಾರ್ದನ ರೆಡ್ಡಿ ಅವರ ಮನೆಯ ಮುಂದೆ ಪ್ರಸ್ತುತ ಶಾಂತ ವಾತಾವರಣವಿದ್ದು, ಕೆಲ ಪೊಲೀಸ್ ಸಿಬ್ಬಂದಿ ಮತ್ತು ಡಿಆರ್ ವಾಹನವನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಅಥವಾ ಬೆಂಬಲಿಗರ ಸಂಚಾರ ಪ್ರಸ್ತುತ ಇಲ್ಲ.
ಪೊಲೀಸ್ ಮೂಲಗಳ ಪ್ರಕಾರ, ನಿನ್ನೆ ನಡೆದ ಗಲಾಟೆಯ ವೇಳೆ ಒಂಬತ್ತಕ್ಕೂ ಹೆಚ್ಚು ಗುಂಡುಗಳು ಪತ್ತೆಯಾಗಿವೆ. ಈ ಗುಂಡುಗಳು ಯಾವ ಪಿಸ್ತೂಲ್ನಿಂದ ಹೊರಬಂದಿವೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದಲ್ಲದೆ, ಮೃತ ರಾಜಶೇಖರ್ ಅವರ ದೇಹದಲ್ಲಿ ಒಂದು ಗುಂಡು ಪತ್ತೆಯಾಗಿದ್ದು, ಎಫ್ಎಸ್ಎಲ್ ತಂಡ ಉಳಿದ ಗುಂಡುಗಳನ್ನು ವಶಪಡಿಸಿಕೊಂಡಿದೆ. ಘಟನೆಗೆ ಬಳಸಲಾಗಿದೆ ಎನ್ನಲಾದ ಕಾರದ ಪುಡಿ, ಸೋಡಾ ಬಾಟಲಿ ಸೇರಿದಂತೆ ಹಲವು ವಸ್ತುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆ ನಿರೀಕ್ಷಿಸಲಾಗಿದೆ.






