---Advertisement---

ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು; ಕೊಠಡಿಯಲ್ಲಿ ಡೈರಿ ಪತ್ತೆ

On: December 30, 2025 12:26 PM
Follow Us:
---Advertisement---

ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆಂಗೇರಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ನಂದಿನಿ ಬಳಸುತ್ತಿದ್ದ ಕೊಠಡಿಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಅವರು ತಮ್ಮ ಮನಸ್ಸಿನಲ್ಲಿದ್ದ ಕೆಲವು ವಿಚಾರಗಳನ್ನು ದಾಖಲಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

2019ರಿಂದ ಕನ್ನಡದ ಹಲವು ಧಾರವಾಹಿಗಳಲ್ಲಿ ನಂದಿನಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು. ‘ಜೀವ ಹೂವಾಗಿದೆ’, ‘ಸಂಘರ್ಷ’, ‘ಮಧುಮಗಳು’, ‘ನೀನಾದೆ ನಾ’ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಧಾರವಾಹಿಗಳಲ್ಲೂ ನಂದಿನಿ ನಟಿಸಿದ್ದರು.

ನಂದಿನಿ ಚಿತ್ರೀಕರಣದ ನಿಮಿತ್ತ ಚೆನ್ನೈಗೆ ಆಗಾಗ್ಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಇತ್ತೀಚೆಗೆ ಅಲ್ಲಿನ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಶೂಟಿಂಗ್ ಮುಗಿದ ಬಳಿಕ ವಿಶ್ರಾಂತಿಗಾಗಿ ಅವರು ಬೆಂಗಳೂರಿಗೆ ಮರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಡಿಸೆಂಬರ್ 28ರಂದು ತಮ್ಮ ಕೋಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಂದಿನಿಯ ಕೊಠಡಿಯಲ್ಲಿ ದೊರೆತ ಡೈರಿಯಲ್ಲಿ, ಸರ್ಕಾರಿ ಉದ್ಯೋಗ ತನ್ನಿಗೆ ಇಷ್ಟವಿಲ್ಲ, ಆಕ್ಟಿಂಗ್‌ವೇ ತನ್ನ ಆಸೆ, ಮನೆಯವರು ತನ್ನ ಮಾತನ್ನು ಕೇಳುತ್ತಿಲ್ಲ ಎಂಬುದನ್ನು ಅವರು ಬರೆದಿಟ್ಟಿದ್ದಾರೆ. ಈ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

2023ರಲ್ಲಿ ಅನುಕಂಪದ ಆಧಾರದಲ್ಲಿ ನಂದಿನಿಗೆ ಸರ್ಕಾರಿ ಉದ್ಯೋಗದ ಅವಕಾಶ ದೊರಕಿತ್ತು. ಆದರೆ ನಟನೆಯ ಮೇಲಿನ ಆಸಕ್ತಿಯಿಂದಾಗಿ ಆ ಉದ್ಯೋಗವನ್ನು ತ್ಯಜಿಸಿದ್ದರು ಎನ್ನಲಾಗಿದೆ. ದೊಡ್ಡ ನಟಿಯಾಗಬೇಕು ಎಂಬ ಕನಸಿನಿಂದ ಆರ್.ಆರ್ ನಗರದಲ್ಲಿ ಅವರು ಆಕ್ಟಿಂಗ್ ತರಬೇತಿಯನ್ನು ಪಡೆದಿದ್ದರು.

ಹೆಸರಘಟ್ಟದ ಖಾಸಗಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ನಂದಿನಿ, ಕಾಲೇಜಿಗೆ ನಿಯಮಿತವಾಗಿ ಹಾಜರಾಗದೇ ಆಕ್ಟಿಂಗ್ ತರಗತಿಗಳಿಗೆ ಹೋಗುತ್ತಿದ್ದರು ಎಂಬ ಮಾಹಿತಿ ಇದೆ. ಅಲ್ಲದೇ ಮನೆಯವರ ವಿರೋಧದ ನಡುವೆಯೂ ಹಠ ಮಾಡಿ ಬೆಂಗಳೂರಿಗೆ ಬಂದು ಜೀವನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಘಟನೆಗೆ ಮುನ್ನ ಭಾನುವಾರ ಸಂಜೆ ಸ್ನೇಹಿತ ಪುನೀತ್ ಅವರ ಮನೆಗೆ ತೆರಳಿದ್ದ ನಂದಿನಿ, ರಾತ್ರಿ ಸುಮಾರು 11.23ರ ವೇಳೆಗೆ ಪಿಜಿಗೆ ವಾಪಸ್ ಬಂದಿದ್ದರು. ಬಳಿಕ ತಮ್ಮ ಕೊಠಡಿಗೆ ಹೋಗಿ ಒಳಗಿನಿಂದ ಲಾಕ್ ಮಾಡಿಕೊಂಡು ವೇಲ್ ಬಳಸಿ ನೇಣು ಬಿಗಿದುಕೊಂಡಿದ್ದಾರೆ.

ಕೆಲವು ಸಮಯದ ನಂತರ ಸ್ನೇಹಿತ ಪುನೀತ್ ಅವರು ನಂದಿನಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಅನುಮಾನಗೊಂಡ ಪುನೀತ್ ಪಿಜಿ ಮ್ಯಾನೇಜರ್‌ಗೆ ಕರೆ ಮಾಡಿ ವಿಚಾರಿಸಿದ್ದು, ನಂತರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ನಂದಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment