ಬಸವಕಲ್ಯಾಣ ಶಾಸಕ ಶರಣು ಸಲ್ಗರ್ ಅವರು 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ ನೂರಕ್ಕೆ ನೂರು ಸಾರಾಯಿ ಬಂದ್ ಮಾಡಿಸಲಾಗುವುದು ಎಂದು ಮಾಧ್ಯಮದ ಮುಂದೆ ಘೋಷಿಸಿದ್ದಾರೆ. ಒಂದು ವೇಳೆ ಸಾರಾಯಿ ಬಂದ್ ಜಾರಿಯಾಗದಿದ್ದರೆ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸದನದಿಂದ ಹೊರಬರುವುದಾಗಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಅವರು, “ಸಾರಾಯಿ ಬಂದ್ ಮಾಡದೇ ಇದ್ದಲ್ಲಿ ಈ ಭಾಗಗಳಿಗೆ ಉಳಿಗಾಲವೇ ಇಲ್ಲ” ಎಂದು ಆತಂಕ ವ್ಯಕ್ತಪಡಿಸಿದರು. ಮದ್ಯದ ದುಷ್ಪರಿಣಾಮಗಳಿಂದ ಸಮಾಜದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಯಾವುದೇ ರಾಜಕಾರಣಿ ಸಾರಾಯಿ ಅಂಗಡಿಗಳನ್ನು ನಡೆಸುತ್ತಿದ್ದರೆ, ಅವರು ಎಷ್ಟೇ ಪ್ರಭಾವಿ ರಾಜಕಾರಣಿಯಾಗಿದ್ದರೂ ಕೂಡ ಅದಕ್ಕೆ ನನ್ನ ತೀವ್ರ ಧಿಕ್ಕಾರ ಎಂದು ಶರಣು ಸಲ್ಗರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಮಾಜದ ಹಿತದೃಷ್ಟಿಯಿಂದ ಸಾರಾಯಿ ಬಂದ್ ಅತ್ಯಗತ್ಯವಾಗಿದ್ದು, ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಖಡಕ್ ಸಂದೇಶ ನೀಡಿದರು.






