ಬೆಂಗಳೂರು, ಡಿಸೆಂಬರ್ 17:
ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರಿಗೆ ಮಹಿಳೆಯೊಬ್ಬರ ಅತಿರೇಕದ ಪ್ರೇಮ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ‘‘Chinni love u… u must love me’’ ಎಂದು ನಿರಂತರವಾಗಿ ಸಂದೇಶ ಹಾಗೂ ಕರೆಗಳ ಮೂಲಕ ಪ್ರೀತಿ ನಿವೇದನೆ ಮಾಡುತ್ತಿದ್ದ ಮಹಿಳೆ, ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತಾನು ಕಾಂಗ್ರೆಸ್ ಕಾರ್ಯಕರ್ತೆ ಎಂದು ಹೇಳಿಕೊಂಡಿರುವ ಮಹಿಳೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಪರಿಚಯವಿದೆ ಎಂದು ಹೇಳುತ್ತಾ, ಮೋಟಮ್ಮ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಇರುವ ಫೋಟೋಗಳನ್ನು ಇನ್ಸ್ಪೆಕ್ಟರ್ಗೆ ಕಳುಹಿಸಿ ಒತ್ತಡ ಹೇರಿದ್ದಾಳೆ ಎನ್ನಲಾಗಿದೆ.
ಠಾಣೆಗೆ ಕಜ್ಜಾಯ ಡಬ್ಬಿ, ಹೂಗುಚ್ಛ!
ಮಹಿಳೆಯ ಕಾಟ ಇಷ್ಟರ ಮಟ್ಟಿಗೆ ತಲುಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸ್ಪೆಕ್ಟರ್ ಠಾಣೆಯಲ್ಲಿ ಇಲ್ಲದ ವೇಳೆ ಕಜ್ಜಾಯದ ಡಬ್ಬಿ ಹಾಗೂ ಹೂಗುಚ್ಛವನ್ನು ಠಾಣೆಗೆ ತಂದು ಇಟ್ಟಿದ್ದಾಳೆ. ಅಲ್ಲದೆ, 11 ವಿಭಿನ್ನ ಮೊಬೈಲ್ ಸಂಖ್ಯೆಗಳ ಮೂಲಕ ನಿರಂತರವಾಗಿ ಕರೆ ಮಾಡಿ ಪ್ರೀತಿ ನಿವೇದನೆ ಮಾಡುತ್ತಿದ್ದ ಕಾರಣ, ಇನ್ಸ್ಪೆಕ್ಟರ್ ಎಲ್ಲಾ ಸಂಖ್ಯೆಗಳನ್ನೂ ಬ್ಲಾಕ್ ಮಾಡಿದ್ದರು.
ರಕ್ತದಲ್ಲಿ ಪತ್ರ, ಆತ್ಮಹತ್ಯೆ ಬೆದರಿಕೆ
ಇದಕ್ಕೂ ಮೀರಿದ ಕ್ರಮವಾಗಿ, ಮಹಿಳೆ ಲವ್ ಲೆಟರ್ ಜೊತೆಗೆ ‘Nexito Plus’ ಮಾತ್ರೆಯನ್ನು ಕೂಡ ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ.
‘‘ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳುತ್ತಿಲ್ಲ. ನಿಮಗೆ ತೊಂದರೆ ಕೊಡಲು ನನಗೆ ಇಷ್ಟವಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನೀವೇ ಕಾರಣ’’ ಎಂದು ಬರೆದು, ಹೃದಯದ ಚಿತ್ರ ಬಿಡಿಸಿ, ‘‘Chinni love u’’ ಎಂದು ರಕ್ತದಲ್ಲಿ ಬರೆದ ಪತ್ರವನ್ನು ಕಳುಹಿಸಿದ್ದಾಳೆ ಎನ್ನಲಾಗಿದೆ.
ಗೃಹ ಸಚಿವರ ಕಚೇರಿಯಿಂದಲೂ ಕರೆ?
ಈ ಮಧ್ಯೆ, ಮಹಿಳೆಯ ದೂರು ಸ್ವೀಕರಿಸುವಂತೆ ಗೃಹ ಸಚಿವರ ಕಚೇರಿಯಿಂದ ಕರೆ ಬಂದಿದೆ ಎನ್ನಲಾಗಿದೆ. ಆದರೆ, ಮಹಿಳೆ ಯಾವುದೇ ಅಧಿಕೃತ ದೂರು ಸಲ್ಲಿಸಿಲ್ಲ ಎಂದು ಇನ್ಸ್ಪೆಕ್ಟರ್ ಸ್ಪಷ್ಟಪಡಿಸಿದ್ದಾರೆ.
ಕೊನೆಗೆ ಕಾನೂನು ಕ್ರಮ
ನಿರಂತರ ಕಾಟದಿಂದ ಬೇಸತ್ತ ಇನ್ಸ್ಪೆಕ್ಟರ್ ಸತೀಶ್, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಆತ್ಮಹತ್ಯೆ ಬೆದರಿಕೆ ಆರೋಪದಡಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.







1 thought on “ಇನ್ಸ್ಪೆಕ್ಟರ್ಗೆ ಅತಿರೇಕದ ಪ್ರೇಮ ಕಾಟ: ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ ಎಫ್ಐಆರ್”
Comments are closed.