ಒಳ ಮೀಸಲಾತಿ ವರ್ಗೀಕರಣದ ವಿರುದ್ಧ ಬಂಜಾರ ಸಮುದಾಯದವರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಸತ್ಯಾಗ್ರಹ ಗುರುವಾರ ಏಳನೇ ದಿನಕ್ಕೆ ತಲುಪಿದೆ. ಪ್ರತಿಭಟನೆಯ ಭಾಗವಾಗಿ ಅವರು ಮೀಸಲಾತಿಯ ಶವಯಾತ್ರೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸವಳಂಗ ರಸ್ತೆಯಲ್ಲಿ ಬಂಜಾರ ಸಮುದಾಯದವರು ಮೀಸಲಾತಿಯ ಶವಯಾತ್ರೆ ನಡೆಸಿದರು. ಶಿವಮೂರ್ತಿ ಸರ್ಕಲ್ ಬಳಿ ಅಣಕು ಶವ ಇಟ್ಟು ಘೋಷಣೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮುಂದುವರಿಯಿತು.
ಶಿವಮೂರ್ತಿ ವೃತ್ತದಲ್ಲಿ ಟ್ರ್ಯಾಕ್ಟರ್ಗಳನ್ನು ರಸ್ತೆಗೆ ಅಡ್ಡಗಟ್ಟಿ ರಸ್ತೆ ತಡೆ ನಡೆಸಲಾಯಿತು. ಇದರಿಂದ ಸವಳಂಗ ರಸ್ತೆ, ಕುವೆಂಪು ರಸ್ತೆ ಹಾಗೂ ಜಯನಗರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ವಾಹನಗಳು ದೀರ್ಘ ಸರತಿಯಲ್ಲಿ ನಿಲ್ಲುವಂತಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅವರು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಇದರಿಂದ ಮೀಸಲಾತಿಯ ಉದ್ದೇಶವೇ ಹಾಳಾಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ನಾವು ಮೀಸಲಾತಿಯ ಶವಯಾತ್ರೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿದ್ದಾಪುರ, ರಾಮನಕೊಪ್ಪ, ವೀರಾಪುರ, ಸಿರಿಯೂರು, ಬಿಳಕಿ, ಹೆಬ್ಬಂಡಿ ಕೋಮಾರನಹಳ್ಳಿ, ಬಾಬಳ್ಳಿ, ನಾಗತಿ ಬೆಳಗಲು, ಹೊಸಹಳ್ಳಿ, ಚಿಕ್ಕಮರಡಿ, ಕಾಟಿಕೆರೆ, ಅಬ್ಬಲಗೆರೆ, ಹುಣಸೋಡು, ಬಿಕ್ಕೋನಹಳ್ಳಿ ಬೀರನಕೆರೆ, ಮೇಲಿನ ಕುಂಚನಹಳ್ಳಿಯ ನಿವಾಸಿಗಳು ಭಾಗವಹಿಸಿದ್ದರು.






