ಮೈಸೂರಿನ ಹುಣಸೂರು ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಗಂಡನನ್ನು ಹತ್ಯೆ ಮಾಡಿದ ಮಹಿಳೆ, ಅವನನ್ನು ಹುಲಿ ದಾಳಿ ನಡೆಸಿ ಎಳೆದುಕೊಂಡು ಹೋಯಿತೆಂದು ಸುಳ್ಳು ಕಥೆ ಹೆಣೆದಿದ್ದಾಳೆ. ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾದ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ 15 ಲಕ್ಷ ಪರಿಹಾರ ಹಣ ಪಡೆಯುವ ಉದ್ದೇಶದಿಂದ ಈ ಕುತಂತ್ರ ರೂಪಿಸಿದ್ದ ಪತ್ನಿ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಮೈಸೂರಿನ ಹುಣಸೂರು ಗ್ರಾಮಾಂತರ ಪೊಲೀಸರು ಬೆಚ್ಚಿಬೀಳಿಸುವ ಪ್ರಕರಣವೊಂದನ್ನು ಪತ್ತೆಹಚ್ಚಿದ್ದಾರೆ. ಮಳವಳ್ಳಿ ತಾಲೂಕಿನ ಕದಂಪುರ ಗ್ರಾಮದ ನಿವಾಸಿ ವೆಂಕಟಸ್ವಾಮಿಯನ್ನು ಹತ್ಯೆ ಮಾಡಿ, ಪರಿಹಾರ ಪಡೆಯಲು ಯತ್ನಿಸಿದ್ದ ಸಲ್ಲಾಪುರಿ (40) ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಡುಪ್ರಾಣಿಗಳ ದಾಳಿಯಲ್ಲಿ ಸಾವಿಗೀಡಾದರೆ ಸರ್ಕಾರದಿಂದ ಸಿಗುವ 15 ಲಕ್ಷ ರೂ. ಪರಿಹಾರ ಪಡೆಯುವ ಉದ್ದೇಶದಿಂದ ಸಲ್ಲಾಪುರಿ ತನ್ನ ಗಂಡನನ್ನು ಹತ್ಯೆ ಮಾಡಿ, ಅವನನ್ನು ಹುಲಿ ಕೊಂದಂತೆ ಸುಳ್ಳು ಕಥೆ ಹೆಣೆದಿದ್ದಾಳೆ. ಆದರೆ ಹುಣಸೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ ಮತ್ತು ತಂಡದ ತನಿಖೆಯಿಂದ ಆಕೆಯ ಸಂಚು ಬಹಿರಂಗಗೊಂಡಿದ್ದು, ಇದೀಗ ಆಕೆ ಪೊಲೀಸರ ಬಂಧನಕ್ಕೊಳಗಾಗಿದ್ದಾಳೆ.
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ಚಿಕ್ಕಹೆಜ್ಜೂರಿನ ಹಾಡಿಯಲ್ಲಿ ಇದು ನಾಗರಹೊಳೆ ಕಾಡಿಂಚಿನಲ್ಲಿರುವ ಜಮೀನು ಬೆಂಗಳೂರಿನ ಬಿಡದಿಯ ಅರುಣ್, ರವಿ ಮತ್ತಿಬ್ಬರು ಸ್ನೇಹಿತರು ಸೇರಿ 4-10ಗುಂಟೆ ಜಮೀನನ್ನು ಖರೀದಿಸಿದ್ದರು. ಜಮೀನನ್ನು ನೋಡಿಕೊಳ್ಳಲು ಈ ದಂಪತಿಗಳನ್ನು ನೇಮಿಸಿದ್ದರು. ಜೀವನದಲ್ಲಿ ಐಷಾರಾಮಿ ಕನಸು ಕಾಣುತ್ತಿದ್ದ ಈಕೆ ಸರ್ಕಾರದ ಯೋಜನೆಗಳಲ್ಲಿ ಹಣ ಪಡೆಯುವ ಉದ್ದೇಶಗಳನ್ನ ಇಟ್ಟುಕೊಂಡು ಆಗಾಗ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಳು.
ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾದವರಿಗೆ ಸರ್ಕಾರ ನೀಡುವ 15 ಲಕ್ಷ ಪರಿಹಾರದ ವಿಷಯ ತಿಳಿದುಕೊಂಡ ಸಲ್ಲಾಪುರಿ ಕುತಂತ್ರ ರೂಪಿಸಿದ್ದಾಳೆ. ಗಂಡನನ್ನು ಕೊಲ್ಲುವ ಉದ್ದೇಶದಿಂದ ಆಕೆ ಕಳೆದ ಮಂಗಳವಾರ ವಿಷ ಹಾಕಿ ಹತ್ಯೆ ಮಾಡಿ, ಬಳಿಕ ಶವವನ್ನು ಮನೆಯಿಂದ ಎಳೆದುಕೊಂಡು ಹೋಗಿ ಮುಖಮಾಡಿ ಗುಂಡಿಯಲ್ಲಿ ಮುಚ್ಚಿದ್ದಾಳೆ. ಇದರಿಂದ ಹುಲಿ ದಾಳಿಗೆ ಬಲಿಯಾದಂತೆ ತೋರಿಸಲು ಯತ್ನಿಸಿದ್ದಾಳೆ. ನಂತರ ಆಕೆ ಠಾಣೆಗೆ ತೆರಳಿ ಪತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದು, ಹುಲಿ ಎಳೆದೊಯ್ದಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾಳೆ. ಆಕೆಯ ಹೇಳಿಕೆಯನ್ನು ನಂಬಿದ ಪೊಲೀಸರು ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಹುಲಿ ದಾಳಿ ನಡೆಸಿದ ಯಾವುದೇ ಕುರುಹುಗಳು ಪೊಲೀಸರಿಗೆ ಸಿಕ್ಕಿಲ್ಲ .ಮಳೆ ಸುರಿದ ಕಾರಣ ಕುರುಹುಗಳು ನಾಶವಾಗಿರಬಹುದೆಂದು ಪೊಲೀಸರು ಊಹಿಸಿದ್ದಾರೆ. ಆದರೆ ಸಿಸಿ ಕ್ಯಾಮರಾದಲ್ಲಿ ಕೇವಲ ಪತ್ನಿ ಸಲ್ಲಾಪುರಿ ಮಾತ್ರ ಓಡಾಡಿರುವುದು ಕಂಡು ಬಂದಿದೆ. ಇನ್ ಸ್ಪೆಕ್ಟರ್ ಮುನಿಯಪ್ಪ ಸಲ್ಲಾಪುರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ವಿಷ ಕೊಟ್ಟು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಸರ್ಕಾರದ ಪರಿಹಾರ ಮೊತ್ತದ ಲಾಲಸೆಯಿಂದಲೇ ಗಂಡನ ಹತ್ಯೆಗೈದಿರುವುದಾಗಿ ಸಲ್ಲಾಪುರಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಪ್ರಕರಣ ಪತ್ತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್ ಮತ್ತು ಡಿವೈಎಸ್ಪಿ ಗೋಪಾಲ ಕೃಷ್ಣ ಮಾರ್ಗದರ್ಶನ ನೀಡಿದ್ದು, ಇನ್ಸ್ಪೆಕ್ಟರ್ ಮುನಿಯಪ್ಪ, ರಾಧಾ, ಮಂಜು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು.







1 thought on “ಮೈಸೂರು: 15 ಲಕ್ಷ ರೂ. ಪರಿಹಾರ ಲಾಲಸೆಯಿಂದ ಪತಿಯನ್ನು ಹತ್ಯೆಗೈದು, ಹುಲಿ ಎಳೆದೊಯ್ದಂತೆ ಸುಳ್ಳು ಹೇಳಿದ ಮಹಿಳೆ!”