ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್ ದರಗಳಿಗೆ ಜಿಎಸ್ಟಿ ಮಂಡಳಿ ಅನುಮೋದನೆ ನೀಡಿದೆ. ಜಿಎಸ್ಟಿ ಕೌನ್ಸಿಲ್ ಸಭೆಯ ಮೊದಲ ದಿನದ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ತೆರಿಗೆ ಕಡಿತದ ವಿಷಯವನ್ನು ಘೋಷಿಸಿದರು. ಈ ತೀರ್ಮಾನದೊಂದಿಗೆ ತುಪ್ಪ, ಬೆಣ್ಣೆ, ಜೀವವಿಮೆ, ಪಾದರಕ್ಷೆ, ಜವಳಿ ಸೇರಿ ಹಲವು ವಸ್ತುಗಳ ಮೇಲೆ ಕೇವಲ 5% ರಷ್ಟು ತೆರಿಗೆ ವಿಧಿಸಲಾಗುವುದು ಎಂಬ ಸಿಹಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ.
ಇದೇ ವೇಳೆ ಎಲ್ಲಾ ರೀತಿಯ ಸಿಗರೇಟು, ತಂಬಾಕು, ಗುಟ್ಕಾ ಮುಂತಾದುವಗಳಿಗೆ ಶೇ 40 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪೆಪ್ಸಿ, ಕೊಕೊಕೋಲಾ ಮುಂತಾದ ತಂಪು ಪಾನೀಯಗಳೂ ಸಹ ಶೇ 40 ರಷ್ಟು ತೆರಿಗೆಗೆ ಒಳಗಾಗಲಿವೆ.
ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದಲೇ ತೆರಿಗೆ ಕಡಿತ ಜಾರಿಗೆ ಬರಲಿದೆ. ಆದರೆ ತಂಬಾಕು ಉತ್ಪನ್ನಗಳು, ಸಿಗರೇಟುಗಳಿಗೆ ಮಾತ್ರ ಅನ್ವಯವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ವಿತ್ತಸಚಿವೆ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷದ ವಹಿವಾಟಿನ ಪ್ರಕಾರ ಈಗಿನ ತೆರಿಗೆ ಕಡಿತವು ಸರ್ಕಾರಕ್ಕೆ 48000 ಲಕ್ಷ ಕೋಟಿ ರೂ. ಹೊರೆಯನ್ನು ತರಲಿದೆ.
ಹಾಲು ಉತ್ಪನ್ನಗಳು ಹಾಗೂ ಜೀವ ಉಳಿಸುವ ಔಷಧಿಗಳಿಗೆ ತೆರಿಗೆ ವಿನಾಯಿತಿ ದೊರೆಯಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಚಪಾತಿ, ರೊಟ್ಟಿ, ದೇಶೀಯ ಬ್ರೆಡ್, ಪನೀರ್ ಮುಂತಾದ ಆಹಾರ ವಸ್ತುಗಳಿಗೂ ಇನ್ನು ಮುಂದೆ ಜಿಎಸ್ಟಿ ವಿಧಿಸಲಾಗುವುದಿಲ್ಲ. ಅಡುಗೆ ಮನೆಯ ಪಾತ್ರೋಪಕರಣಗಳು, ಸಣ್ಣ ಮಟ್ಟದ ವಾಹನಗಳ ಜಿಎಸ್ಟಿ ಹೊರೆಯನ್ನೂ ಸಹ ಇಳಿಸಿರುವುದು ಮಧ್ಯಮ ವರ್ಗಕ್ಕೆ ಭಾರೀ ಸಂತಸ ತಂದಿದೆ.
ಇಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಹಣಕಾಸು ಮಂತ್ರಿಗಳೂ ಪಾಲ್ಗೊಂಡಿದ್ದರು. ಸಭೆಯಲ್ಲಿ ಜಿಎಸ್ಟಿ ಕಡಿತದ ನಿರ್ಧಾರವನ್ನು ಚರ್ಚಿಸಿದಾಗ ಪ್ರತಿಯೊಬ್ಬ ಸಚಿವರೂ ಅದಕ್ಕೆ ತಮ್ಮ ಸಂಪೂರ್ಣ ಸಹಮತ ಸೂಚಿಸಿದರು. ತೆರಿಗೆ ಕಡಿತದ ವಿಷಯದಲ್ಲಿ ಎಲ್ಲ ರಾಜ್ಯಗಳೂ ಒಂದೇ ಧ್ವನಿಯಲ್ಲಿ ಬೆಂಬಲ ನೀಡಿರುವುದು ಸಂತೋಷದ ಸಂಗತಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದೇ ಸಂದರ್ಭದಲ್ಲಿ ಅವರು, “ಎಲ್ಲಾ ರಾಜ್ಯಗಳ ಹಣಕಾಸು ಮಂತ್ರಿಗಳ ಸಹಕಾರ ಮತ್ತು ಒಗ್ಗಟ್ಟಿಗೆ ನಾನು ಹೃತ್ಪೂರ್ವಕವಾಗಿ ಅಭಾರಿಯಾಗಿದ್ದೇನೆ” ಎಂದು ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು.
ಸಾಮಾನ್ಯ ವರ್ಗಕ್ಕೆ ಅನುಕೂಲವಾಗಿರುವ ಎಲ್ಲಾ ವಸ್ತುಗಳ ಬೆಲೆಯನ್ನೂ ಉದಾಹರಣೆಗೆ ಹೇರ್ ಆಯಿಲ್,ಟೂತ್ ಪೇಸ್ಟ್, ಟೂತ್ ಬ್ರಷ್ , ಟೇಬಲ್ ವೇರ್ , ಕಿಚನ್ ವೇರ್, ಸ್ನಾನದ ಸೋಪ್, ಶಾಂಪೂ, ಬೈಸಿಕಲ್, ಗೃಹೋಪಯೋಗಿ ವಸ್ತುಗಳು ಮುಂತಾದವುಗಳು ಜಿಎಸ್ಟಿಯನ್ನು ಶೇ 18 ಅಥವಾ ಶೇ 12 ರಿಂದ ಎಲ್ಲವನ್ನೂ ಶೇ 5 ಕ್ಕೆ ಇಳಿಸಲಾಗಿದೆ.
ಐಷಾರಾಮಿ ವಸ್ತುಗಳಿಗೆ ಜಿಎಸ್ಟಿಯನ್ನು ಶೇ 28 ರಿಂದ ಶೇ 40 ಕ್ಕೆ ಏರಿಸಲಾಗಿದೆ. ವಿಮಾನ ಯಾನ, ದುಬಾರಿ ಕಾರ್ಗಳು, ಹೆಲಿಕ್ಯಾಪ್ಟರ್ ಯಾನ, ದುಬಾರಿ ಬೈಕುಗಳು ಇನ್ನು ಮುಂದೆ ಶೇ 40 ರ ಜಿಎಸ್ ಟಿ ಸ್ಲಾಬ್ ನಲ್ಲಿ ಬರಲಿದೆ.
ಜಿಎಸ್ಟಿ ಸರಳೀಕರಣಗೊಳಿಸುವುದರಿಂದ ರಾಜ್ಯಗಳ ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ಹಲವು ರಾಜ್ಯಗಳು ತಮ್ಮ ಅಹವಾಲು ತೋಡಿಕೊಂಡಿದ್ದವು. ಒಂದು ವೇಳೆ ಈ ರೀತಿ ಜಿಎಸ್ಟಿ ಆದಾಯ ಕಡಿಮೆಯಾದರೆ ಅದನ್ನು ಕೇಂದ್ರ ಸರ್ಕಾರ ಭರಿಸಿಕೊಡಬೇಕೆಂದು ರಾಜ್ಯ ಸರ್ಕಾರಗಳು ಮನವಿ ಮಾಡಿಕೊಂಡಿದ್ದವು.
ಕರ್ನಾಟಕ್ಕೆ 72 ಸಾವಿರ ಕೋಟಿ ರೂ. ನಷ್ಟವಾಗಲಿದೆ ಎನ್ನಲಾಗಿದೆ. ಸಕ್ಕರೆಯ ಪ್ರಮಾಣ ಹೆಚ್ಚಿರುವ ತಂಪು ಪಾನೀಯಗಳ ಜಿಸ್ಟಿಯನ್ನು ಹೆಚ್ಚಿಸಿರುವುದು ಜನರ ಆರೋಗ್ಯ ದೃಷ್ಟಿಯಿಂದಲೂ ಸಹ ಉತ್ತಮ ತೀರ್ಮಾನ ಎನ್ನಲಾಗಿದೆ. ಅಲ್ಲದೇ ಇದರಿಂದ ಪೆಪ್ಸಿ, ಕೊಕೊಕೋಲಾ ಗಳಂತಹ ಬಹುರಾಷ್ಟ್ರೀಯ ಕಂಪನಿಗಳಿಗೂ ಹೊಡೆತ ಬೀಳಲಿದೆ.






