02/09/2025 ಭಾಲ್ಕಿ: ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಮಂಗಳವಾರ ಭಾಲ್ಕಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಆಯ್ಕೆಯಾದ 23 ಮಂದಿ ರೈತ ಫಲಾನುಭವಿಗಳಿಗೆ ಗಂಗಾಕಲ್ಯಾಣ ಸಾಮೂಹಿಕ ಏತ ನೀರಾವರಿ ಯೋಜನೆ ಅಡಿಯಲ್ಲಿ ಮೋಟಾರ್, ಪಂಪ್ಸೆಟ್ ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮದ ಸಹಕಾರದಿಂದ ಆಯೋಜಿಸಲಾಗಿತ್ತು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಬದ್ಧ – ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು, “ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರ ಜೀವನಮಟ್ಟ ಸುಧಾರಿಸಲು, ಸ್ವಾವಲಂಬಿ ಕೃಷಿಗೆ ಉತ್ತೇಜನ ನೀಡಲು ಈ ರೀತಿಯ ನೀರಾವರಿ ಯೋಜನೆಗಳು ಮಹತ್ವದ್ದಾಗಿವೆ. ಭೂಗರ್ಭಜಲವನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿ ಉತ್ಪಾದಕತೆ ಹೆಚ್ಚಿಸಬಹುದು,” ಎಂದು ಹೇಳಿದರು.
ಅವರು ರೈತರನ್ನು ಉದ್ದೇಶಿಸಿ, ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು. “ಸರ್ಕಾರದ ಉದ್ದೇಶ ರೈತನ ಆದಾಯ ದ್ವಿಗುಣಗೊಳಿಸುವುದು. ಇದಕ್ಕಾಗಿ ಎಲ್ಲ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ,” ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಅಲ್ಪಸಂಖ್ಯಾತರ ನಿಗಮದ ಅಧಿಕಾರಿಗಳು ಹಾಗೂ ಹಲವಾರು ರೈತರು ಭಾಗವಹಿಸಿದ್ದರು. ಫಲಾನುಭವಿಗಳು ಸರ್ಕಾರದ ಈ ನೆರವಿಗೆ ಧನ್ಯವಾದ ತಿಳಿಸಿದರು.






