ಬೆಂಗಳೂರು (ಜ. 18): ಮ್ಯಾಟ್ರಿಮೋನಿ ಸೈಟ್ಗಳ ಮೂಲಕ ಪರಿಚಯವಾಗಿ, ಕೋಟಿ ಕೋಟಿ ಆಸ್ತಿಯ ಆಮಿಷವೊಡ್ಡಿ ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್ವೇರ್ ಇಂಜಿನಿಯರ್ ಯುವತಿಯನ್ನು ಬರೋಬ್ಬರಿ 1.75 ಕೋಟಿ ರೂಪಾಯಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಕೇವಲ ಒಬ್ಬ ವ್ಯಕ್ತಿಯಷ್ಟೇ ಅಲ್ಲ, ಆತನ ಇಡೀ ಕುಟುಂಬವೇ ಸೇರಿಕೊಂಡು ವಂಚನೆಗೆ ಸಂಚು ರೂಪಿಸಿರುವ ಆಘಾತಕಾರಿ ಸತ್ಯ ಬಯಲಾಗಿದೆ.
ಇದನ್ನು ಓದಿ: ಲಕ್ಕುಂಡಿ ಚಿನ್ನ ಪ್ರಕರಣಕ್ಕೆ ಹೊಸ ತಿರುವು: ನಿಧಿಯಲ್ಲ ಎಂದ ಎಎಸ್ಐ, ಚಿನ್ನ ನಮ್ಮದೇ ಎಂದ ಕುಟುಂಬದ ಒತ್ತಾಯ
ಘಟನೆಯ ಹಿನ್ನೆಲೆ
ವೈಟ್ಫೀಲ್ಡ್ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಯುವತಿಗೆ 2024ರ ಮಾರ್ಚ್ನಲ್ಲಿ ಮ್ಯಾಟ್ರಿಮೋನಿ ಸೈಟ್ ಮೂಲಕ ವಿಜಯ್ ರಾಜ್ ಗೌಡ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ತಾನು ದೊಡ್ಡ ಉದ್ಯಮಿ, ಸುಮಾರು 715 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ನಂಬಿಸಿದ್ದ ವಿಜಯ್, ಯುವತಿಯ ಮನಗೆದ್ದಿದ್ದ. ಅಲ್ಲದೆ ತನ್ನ ತಂದೆ ಬೋರೆಗೌಡ ಅವರನ್ನು ‘ನಿವೃತ್ತ ತಹಶೀಲ್ದಾರ್’ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಟ್ಟಿದ್ದ.
ಪತ್ನಿಯನ್ನು ‘ಅಕ್ಕ’ ಎಂದು ಪರಿಚಯಿಸಿದ್ದ ಕಿರಾತಕ
ವಂಚನೆಯ ಸಂಚು ಎಷ್ಟು ಭೀಕರವಾಗಿತ್ತೆಂದರೆ, ವಿಜಯ್ ರಾಜ್ ಗೌಡ ಎಂಬಾತನಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವೂ ಇತ್ತು. ಆದರೆ ಯುವತಿಯನ್ನು ನಂಬಿಸಲು ತನ್ನ ಸ್ವಂತ ಪತ್ನಿ ಸೌಮ್ಯಳನ್ನೇ ‘ಅಕ್ಕ’ ಎಂದು ಪರಿಚಯಿಸಿದ್ದ. ಕೆಂಗೇರಿ ಬಳಿ ಯುವತಿಯನ್ನು ಕರೆಸಿಕೊಂಡಿದ್ದ ಈ ಕುಟುಂಬ, ತಾವೆಲ್ಲರೂ ಸೇರಿ ಮದುವೆಯ ಮಾತುಕತೆ ನಡೆಸುವ ನಾಟಕವಾಡಿದ್ದರು. ಈ ವೇಳೆ ವಿಜಯ್ನ ತಂದೆ ಬೋರೆಗೌಡ, “ನಿಮ್ಮ ಹಣಕ್ಕೆ ನಾನೇ ಗ್ಯಾರೆಂಟಿ” ಎಂದು ಅಭಯ ನೀಡಿದ್ದರು.
ಹಂತ ಹಂತವಾಗಿ ನಡೆದ ಲೂಟಿ
ಒಮ್ಮೆ ಯುವತಿಯ ನಂಬಿಕೆ ಗಳಿಸಿದ ಬಳಿಕ ವಿಜಯ್ ತನ್ನ ಅಸಲಿ ಆಟ ಆರಂಭಿಸಿದ್ದ.
• ತನ್ನ ಆಸ್ತಿ ವಿಚಾರವಾಗಿ ಇಡಿ (ED) ಕೇಸ್ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ ಎಂದು ನಂಬಿಸಲು ನಕಲಿ ಕೋರ್ಟ್ ದಾಖಲೆಗಳನ್ನು ತೋರಿಸಿದ್ದ.
• ತುರ್ತು ಅಗತ್ಯವಿದೆ ಎಂದು ಹೇಳಿ ಮೊದಲಿಗೆ 15 ಸಾವಿರ ರೂ. ಪಡೆದಿದ್ದ.
• ನಂತರ ‘ಒಟ್ಟಿಗೆ ಬಿಸಿನೆಸ್ ಮಾಡೋಣ’ ಎಂದು ಯುವತಿಯ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಿಂದ ಸಾಲ ಮಾಡಿಸಿದ್ದ.
• ಯುವತಿ ಮಾತ್ರವಲ್ಲದೆ, ಆಕೆಯ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಬಿಸಿನೆಸ್ ಲಾಭದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಸಾಲ ಕೊಡಿಸಿದ್ದ.
ಈ ರೀತಿ ಹಂತ ಹಂತವಾಗಿ ಬರೋಬ್ಬರಿ 1.75 ಕೋಟಿ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ.
ಸತ್ಯ ಬಯಲಾಗಿದ್ದು ಹೇಗೆ?
ಬಹಳ ದಿನಗಳಾದರೂ ಹಣ ವಾಪಸ್ ನೀಡದಿದ್ದಾಗ ಯುವತಿ ಒತ್ತಾಯಿಸಲು ಆರಂಭಿಸಿದ್ದಳು. ಆಗ ವಿಜಯ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ ಎಂದು ಹೇಳಿ ಕಾಲಹರಣ ಮಾಡುತ್ತಿದ್ದ. ಒತ್ತಡ ಹೆಚ್ಚಾದಾಗ ಕೇವಲ 22 ಲಕ್ಷ ರೂಪಾಯಿ ವಾಪಸ್ ನೀಡಿ, ಉಳಿದ ಹಣ ಕೇಳಿದರೆ ಜೀವ ಬೆದರಿಕೆ ಹಾಕಲಾರಂಭಿಸಿದ್ದ.
ಇದರಿಂದ ಅನುಮಾನಗೊಂಡ ಯುವತಿ ವಿಜಯ್ನ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಆತನಿಗೆ ಈಗಾಗಲೇ ಮದುವೆಯಾಗಿರುವುದು ಮತ್ತು ಆತ ಪರಿಚಯಿಸಿದ್ದ ‘ಅಕ್ಕ’ ಎಂಬ ಮಹಿಳೆ ಬೇರೆ ಯಾರೂ ಅಲ್ಲ, ಆತನ ಪತ್ನಿಯೇ ಎಂಬ ಸತ್ಯ ತಿಳಿದು ಆಘಾತಕ್ಕೊಳಗಾಗಿದ್ದಾಳೆ.
ಪೊಲೀಸ್ ದೂರು
ಮೋಸಹೋದ ಯುವತಿ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ವಿಜಯ್ ರಾಜ್ ಗೌಡ, ಬೋರೆಗೌಡ ಹಾಗೂ ಸೌಮ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳ ಕೆಂಗೇರಿ ವ್ಯಾಪ್ತಿಗೆ ಸೇರಿರುವುದರಿಂದ ಪ್ರಕರಣವನ್ನು ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಸದ್ಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.






