ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಹತ್ತಿರದ ಚಿಕ್ಕನಜಿ ಕ್ರಾಸ್ (ತಿಳವಳ್ಳಿ ಕ್ರಾಸ್) ಕೆರೆಯಲ್ಲಿ ಬಿದ್ದು ಎರಡೂವರೆ ವರ್ಷದ ಬಾಲಕಿ ಪೂಜಾ ನಾಗಪ್ಪ ದುರಮುರಗಿ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾಳೆ. ಆಕಸ್ಮಿಕವಾಗಿ ನಡೆದ ಈ ಘಟನೆಗೆ ಸ್ಥಳೀಯರಲ್ಲಿ ದುಃಖದ ವಾತಾವರಣ ಆವರಿಸಿದೆ.
ಬ್ಯಾಡಗಿ ತಾಲ್ಲೂಕಿನ ಹಿರಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚಿಕ್ಕನಜಿ ಕ್ರಾಸ್ನಲ್ಲಿ ಬುಧವಾರ ಈ ದುರ್ಘಟನೆ ಸಂಭವಿಸಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಬಾಲಕಿಯ ಸಾವಿಗೆ ಸಂಬಂಧಪಟ್ಟಂತೆ ಕಾಗಿನೆಲೆ ಪೊಲೀಸರು, ಅಸಹಜ ಸಾವು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
“ಕೆರೆಗೆ ಸಮೀಪದಲ್ಲಿರುವ ಜಾಗದಲ್ಲಿ ಅಲೆಮಾರಿ ಸಿಂಧೋಳು ಸಮುದಾಯದವರು, ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದಾರೆ. ಅವರಿಗೆ ಕನಿಷ್ಠ ಸೌಲಭ್ಯವೂ ಇಲ್ಲ. ಇದೇ ಸ್ಥಳಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಇತ್ತೀಚೆಗೆ ಭೇಟಿ ನೀಡಿದ್ದರು. ಸೌಲಭ್ಯ ಕಲ್ಪಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ನಡುವೆಯೇ ಈಗ ಬಾಲಕಿ ಮೃತಪಟ್ಟಿದ್ದಾಳೆ. ಇದಕ್ಕೆ ಅಧಿಕಾರಿಗಳೇ ಹೊಣೆ” ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
“ಬಾಲಕಿ ಪೂಜಾಳ ಪೋಷಕರು ಬುಧವಾರ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಪೂಜಾ ಗುಡಿಸಲಿನಲ್ಲಿ ಇದ್ದಳು. ಆಟವಾಡಲೆಂದು ಮನೆಯಿಂದ ಹೊರಗೆ ಬಂದಿದ್ದಳು. ಆಟವಾಡುತ್ತ, ಗುಡಿಸಲು ಸಮೀಪದಲ್ಲಿರುವ ಕೆರೆ ಬಳಿ ಹೋಗಿದ್ದಳು. ಅಲ್ಲಿಯೇ ಆಯತಪ್ಪಿ ಕೆರೆಗೆ ಬಿದ್ದಿದ್ದಳು. ನೀರಿನಲ್ಲಿ ಮುಳುಗಿದ್ದಳು. ಕೆಲ ನಿಮಿಷಗಳಲ್ಲಿ ಬಾಲಕಿಯನ್ನು ನೋಡಿದ್ದ ಕೆಲವರು, ಸಮೀಪದಲ್ಲಿದ್ದ ಹಂಸಬಾವಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಮಾರ್ಗಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಗಿ ಗೊತ್ತಾಗಿದೆ” ಎಂದು ತಿಳಿಸಿದರು.






